ಪ್ರಧಾನ ಸುದ್ದಿ

ಗುಂಟೂರು ಆಸ್ಪತ್ರೆಯಲ್ಲಿ ಹಸುಗೂಸಿಗೆ ಇಲಿ ಕಚ್ಚಿ ಸಾವು; ಮೂವರ ಅಮಾನತು

Guruprasad Narayana
ಗುಂಟೂರು: ಆಘಾತಕಾರಿ ಘಟನೆಯೊಂದರಲ್ಲಿ, ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಗಂಭೀರ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ೧೦ ದಿನದ ಗಂಡು ಕೂಸಿಗೆ ಇಲಿಗಳು ಕಚ್ಚಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. 
ಈ ಘಟನೆಯಿಂದ ಅಘಾತಗೊಂಡಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. "ಗುಂಟೂರು ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ಹಸುಗೂಸೊಂದು ಮೃತಪಟ್ಟಿರುವ ಸುದ್ದಿ ಕೇಳಿ ಅಘಾತಗೊಂಡಿದ್ದೇನೆ ಹಾಗು ವಿಚಲಿತನಾಗಿದ್ದೇನೆ. ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇನೆ. ೪೮ ಘಂಟೆಗಳ ಒಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದ್ದು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ" ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ. 
ಈ ಸಾವು ಶಸ್ತ್ರ ಚಿಕಿತ್ಸೆಯ ನಂತರ ಉಂಟಾದ ತೊಂದರೆಗಳಿಂದಾಗಿದ್ದು, ಇಲಿ ಕಡಿತ ಕಾಕತಾಳೀಯವಷ್ಟೇ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. 
ಈ ಘಟನೆಯಿಂದ ದುಃಖದ ಮಡುವಿನಲ್ಲಿರುವ ಪೋಷಕರಾದ ನಾಗು ಮತ್ತು ಲಕ್ಷ್ಮಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ೧೦ ದಿನದ ಹಸುಗೂಸಿಗೆ, ಹಲವಾರು ಆರೋಗ್ಯ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಆಗಸ್ಟ್ ೨೦ ರಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 
ಭಾನುವಾರ ಈ ಹಸುಗೂಸಿನ ಕಾಲ್ಬೆರಳುಗಳಿಗೆ ಇಲಿಗಳು ಕಚ್ಚಿದ್ದವು. ಇದನ್ನು ಗಮನಿಸಿದ್ದ ಪೋಷಕರು ಸಿಬ್ಬಂದಿಗೆ ವಿಷಯ ತಿಳಿಸಲಾಗಿತ್ತು. ಆದರೆ ಮರುದಿನ ಇಲಿಗಳು ಮಗುವಿನ ಮುಖ, ಎದೆ ಮತ್ತು ಕೈಗಳಿಗೂ ಕಚ್ಚಿವೆ ಎಂದು ಪೋಷಕರು ದೂರಿದ್ದಾರೆ. ಇದಕ್ಕೆ ಮಗುವುಗೆ ಚಿಕಿತ್ಸೆ ನೀಡಲಾಗಿತ್ತಾದರೂ ಬುಧವಾರ ಮಧ್ಯಾಹ್ನ ೨ ಘಂಟೆಗೆ ಮಗು ಮೃತಪಟ್ಟಿದೆ. 
SCROLL FOR NEXT