ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಹಗರಣದ ಆರೋಪ ಎದುರಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ರಾಜಿನಾಮೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಮಂಗಳವಾರ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ರೀತಿ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ, ಆರೋಪಮುಕ್ತರಾಗಿ ಬಂದು ಮತ್ತೆ ಸಚಿವ ಸ್ಥಾನ ಅಲಂಕರಿಸಿ ಎಂದು ಜೋಟ್ಲಿ ಅವರಿಗೆ ಪ್ರಧಾನಿ ಸಲಹೆ ನೀಡಿದ್ದಾರೆ. ಈ ಮೂಲಕ ಜೇಟ್ಲಿ ರಾಜಿನಾಮೆಯ ಸುಳಿವು ನೀಡಿದ್ದಾರೆ ಎಂದು ಯೆಚೂರಿ ವರದಿಗಾರರಿಗೆ ತಿಳಿಸಿದ್ದಾರೆ.
ತಮ್ಮ ವಿರುದ್ಧ ಹವಾಲ ಹಗರಣದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಡ್ವಾಣಿ ಅವರು ಕೂಡಲೇ ರಾಜಿನಾಮೆ ನೀಡಿದ್ದರು. ಈಗ ಜೇಟ್ಲಿ ಅವರು ಅದೇ ರೀತಿ ಆರೋಪ ಎದುರಿಸುತ್ತಿದ್ದು, ಬಿಜೆಪಿ ಹಿರಿಯ ನಾಯಕನನ್ನೇ ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.
2000ದಿಂದ 2013ರವರೆಗೆ ಡಿಡಿಸಿಎ ಮುಖ್ಯಸ್ಥರಾಗಿದ್ದ ಜೇಟ್ಲಿ ಅವರು ಕ್ರಿಕೆಟ್ ಸಂಸ್ಥೆಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸದಸ್ಯರು ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಸಹ ಒತ್ತಾಯಿಸಿದ್ದರು.