ಶಿವಮೊಗ್ಗ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆ ಗುರುವಾರ ಸಂಜೆ ನಡೆಸುತ್ತಿದ್ದ ಏಕತಾ ಮೆರವಣಿಗೆ ವೇಳೆ ನಗರದಲ್ಲಿ ಉಂಟಾದ ಗಲಭೆ ವಿಕೋಪಕ್ಕೆ ತಿರುಗಿ, ಗ್ರಾಮಾಂತರ ಪ್ರದೇಶಕ್ಕೂ ವಿಸ್ತಾರಗೊಂಡಿದ್ದು, ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಫೆಬ್ರವರಿ 25ರವರೆಗೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೃತರನ್ನು ವಿಶ್ವನಾಥ(35) ಎಂದು ಗುರಿತಿಸಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮೃತಪಟ್ಟ ವಿಶ್ವನಾಥ್ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಐಪಿಸಿ ಸೆಕ್ಷನ್ 144 ರಡಿ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೆ ಇಂದು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಡಿಸಿ ವಿ.ಪಿ ಇಕ್ಕೇರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಿಗುವಿನ ವಾತಾವರಣವಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ನಗರಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ. ಏಕತಾ ಮೆರವಣಿಗೆ ವೇಳೆ ಪರಸ್ಪರ ಘೋಷಣೆ, ಕೂಗಾಟ ಆರಂಭವಾಗಿ ಅನಂತರ ಕಲ್ಲು ತೂರಾಟವೂ ನಡೆಯಿತು. ಉದ್ವಿಗ್ನರ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಸವಾರ್ಲೈನ್ ರಸ್ತೆಯಲ್ಲಿ ಅಶ್ರುವಾಯು ಸಿಡಿಸಿದರು.
ಘಟನೆಗೆ ಕಾರಣ? ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದ ಹಿನ್ನೆಲೆಯಲ್ಲಿ ಬೈಪಾಸ್ ರಸ್ತೆಯಿಂದ ಜಾಥಾ ನಡೆಯುತ್ತಿತ್ತು. ಬಿ.ಎಚ್.ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಶಿವಪ್ಪ ನಾಯಕ ವೃತ್ತದ ಬಳಿ ಕೆಲವರು ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲೇ ಇದ್ದ ಹಿಂದೂ ಸಂಘಟನೆಯ ಕೆಲವರು ಪ್ರತಿ ಘೋಷಣೆ ಕೂಗಿದರು. ಇದೇ ವೇಳೆ ಕಿಡಿಗೇಡಿಯೊಬ್ಬ ಕಲ್ಲು ತೂರಿದ್ದು ಗಲಭೆಗೆ ಕಾರಣವಾಯಿತು.
ತಕ್ಷಣ ಹಿಂದೂ ಕಾರ್ಯಕರ್ತರು ಶಿವಪ್ಪ ನಾಯಕ ಪ್ರತಿಮೆಯ ಸುತ್ತ ಮೆರವಣಿಗೆ ನಡೆಸಿದರು. ರಸ್ತೆಯ ಬದಿಯಲ್ಲಿ ಹಾಕಲಾಗಿದ್ದ ಪಿಎಫ್ಐ ಧ್ವಜ ಹಾಗೂ ಫ್ಲೆಕ್ಸ್ಗಳನ್ನು ಕಿತ್ತುಹಾಕಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.
ರಾತ್ರಿ ಹಲ್ಲೆ: ಕೆಲ ಕಿಡಿಗೇಡಿಗಳು ನಗರದ ಹಲವೆಡೆ ಬೈಕ್ಗಳಿಗೆ ಹಾಗೂ ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆ ನಡೆದ ಎರಡು ಗಂಟೆಯಲ್ಲಿ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ರಾತ್ರಿ 9 ಗಂಟೆ ಸಮಯದಲ್ಲಿ ಗಾಜನೂರು ಸಮೀಪದ ಬೈಕ್ನಲ್ಲಿ ತೆರಳುತ್ತಿದ್ದ ವಿಶ್ವನಾಥ್ ಮೇಲೆ ಸಮಾವೇಶಕ್ಕೆ ಬಂದಿದ್ದ ಗುಂಪೊಂದು ಮೇಲೆ ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡ ವಿಶ್ವನಾಥ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ತೀವ್ರ ಗಾಯಗೊಂಡ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.