ಪ್ರಧಾನ ಸುದ್ದಿ

ಕಾಶ್ಮೀರದಲ್ಲಿ ಮೂವರು ನುಸುಳುಕೋರರನ್ನು ಹತ್ಯೆಮಾಡಿದ ಸೇನೆ

Guruprasad Narayana

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಮೂವರು ಪ್ರತ್ಯೇಕವಾದಿ ಗೆರಿಲ್ಲಾಗಳು ಭಾರತಕ್ಕೆ ನುಸುಳುವುದನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಮೂವರನ್ನೂ ಹತ್ಯೆಗೈದಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಕೇರನ್ ವಿಭಾಗದ ಗಡಿ ನಿಯಂತ್ರಣಾ ರೇಖೆಯ ಬಳಿ ಶಂಕಾಸ್ಪದ ಚಲನವಲನ ಕಂಡುಬಂದದ್ದರಿಂದ ಎಚ್ಚರಗೊಂಡ ಸೇನಾ ತುಕಡಿ ಭಾನುವಾರ ಸಂಜೆ ದಾಳಿ ನಡೆಸಿದೆ" ಎಂದು ಶ್ರೀನಗರದಲ್ಲಿ ಸೇನೆಯ ವಕ್ತಾರ ತಿಳಿಸಿದ್ದಾರೆ.

"ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರು ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಹಲವು ಘಂಟೆಗಳವರೆಗೆ ಕಾದಾಟ ಮುಂದುವರೆದಿದೆ. ಈ ಕಾದಾಟದಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಗುಂಡಿನ ದಾಳಿಯ ನಂತರ ಅವರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ವಕ್ತಾರ ತಿಳಿಸಿದ್ದಾರೆ.

"ಮೂರು ಎ ಕೆ ೪೭ ಬಂಧೂಕುಗಳು, ೧೨ ಎ ಕೆ ತೋಟಾಗಳು, ೩೦೦ ಸುತ್ತಿನ ಏಕೆ ಬುಲೆಟ್ ಗಳು, ಎರಡು ಗ್ರೆನೇಡ್ ಲಾಂಚರ್ ಗಳನ್ನು ಹತ್ಯೆಗೈದ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT