ಪ್ರಧಾನ ಸುದ್ದಿ

ಸ್ಮಾರಕವಾದ ಅಣ್ಣಾ ವಿಶ್ವವಿದ್ಯಾಲಯದ ಕಲಾಂ ಕೊಠಡಿ

Guruprasad Narayana

ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ಮೊದಲ ಮಹಡಿಯ ಅತಿಥಿ ಗೃಹದ ಕೋಣೆ ಈಗ ಬಿಕೋ ಎನ್ನುತ್ತಿದೆ. ಹೌದು ಈ ಕೋಣೆಯನ್ನು ಬಳಸುತ್ತಿದ್ದು ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್. ವಿಶ್ವವಿದ್ಯಾಲಯದ ಗೌರವ ಪ್ರೊಫೆಸರ್ ಆಗಿದ್ದಾಗ ಉಳಿದುಕೊಂಡಿದ್ದ ಈ ಕೋಣೆಯನ್ನು ಅವರಿಗಾಗಿಯೇ ಮೀಸಲಿಡಲಾಗಿತ್ತು. ಈಗ ಆ ಕೋಣೆಯನ್ನು ಜೀವಂತವಾಗಿರಿಸಲು ಅದನ್ನು ಎಪಿಜೆ ಅಬ್ದುಲ್ ಕಲಾಮ್ ಅವರ ಸ್ಮಾರಕವಾಗಿ ಬದಲಾಯಿಸಲಾಗಿದೆ.

"ಕೋಣೆ ಹೇಗಿದೆಯೋ ಹಾಗೆಯೇ ಉಳಿಸಿಕೊಂಡಿದ್ದೇವೆ" ಎನ್ನುತ್ತಾರೆ ಸಹ ರಿಜಿಸ್ಟಾರ್ ಟಿ ನಾಗರಾಜನ್. ಮೇಜಿನ ಮೇಲಿರುವ ಪವಿತ್ರ ಕುರಾನ್, ಎಲ್ ಗೋಪಕುಮಾರ್ ಅವರ ಲಯ ಮಧುರಂ ಸಂಗೀತದ ಸಿ ಡಿ ಮತ್ತು ಟೇಪ್ ರೆಕಾರ್ಡರ್ ನತ್ತ ಬೆಟ್ಟು ಮಾಡುವ ಅವರು "ಅವರು(ಕಲಾಂ) ಕರ್ನಾಟಕ ಸಂಗೀತವನ್ನು ಹೆಚ್ಚಾಗಿ ಕೇಳುತ್ತಿದ್ದರು. ಎಂ ಎಸ್ ಸುಬ್ಬಲಕ್ಷ್ಮಿಯವರ ಅತಿ ದೊಡ್ಡ ಅಭಿಮಾನಿ. ಅವರು ಬೆಳಗ್ಗೆ ೫ ಘಂಟೆಗೆ ಎದ್ದು ಕುರಾನ್ ಓದಿ, ಕರ್ನಾಟಕ ಸಂಗೀತದ ಹಾಡುಗಾರಿಕೆ ಕೇಳಿ ಗಾಳಿಸೇವನೆಗೆ ತೆರಳುತ್ತಿದ್ದರು. ಆಗ ವಿದ್ಯಾರ್ಥಿಗಳು ಅವರಿಗೆ ಪ್ರಶ್ನೆ ಕೇಳಲು ಸಾಲುಗಟ್ಟಿ ನಿಂತಿರುತ್ತಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಕಲಾಂ ಅವರು ವಿಶ್ವವಿದ್ಯಾಲಯದಲ್ಲಿರುವಾಗಲೇ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಕರೆ ಬಂದು ರಾಷ್ಟ್ರಪತಿಯ ಪ್ರಸ್ತಾವನೆಯಿಟ್ಟಿದಂತೆ. "ಅವರು (ಕಲಾಂ) ಮಲಗುವ ಕೋಣೆಯಲ್ಲಿ ಕುಳಿತಿದ್ದರು. ದೂರವಾಣಿ ರಿಂಗಣಿಸಿದಾಗ ನಾನೇ ಉತ್ತರಿಸಿದೆ. ಆಗ ಮತ್ತೊಂದು ಬದಿಯಿಂದ ಯಾರೋ ಒಬ್ಬರು ಪ್ರಧಾನಿ, ಕಲಾಂ ಅವರೊಂದಿಗೆ ಮಾತನಾಡಬೇಕು ಎಂದು ತಿಳಿಸಿದಾಗ ನನಗೆ ಭಯವಾಗಿ ಫೋನ್ ಅವರಿಗೆ ನೀಡಿದೆ. ಅವರು ಶಾಂತಿಯಿಂದ ಆಲಿಸಿ ಈ ಪ್ರಸ್ತಾವನೆಯನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಬೇಕೆಂದರು. ನನ್ನ ಮತ್ತು ಬಾಲು ಎಡೆಗೆ ತಿರುಗಿ ವಿಷಯ ತಿಳಿಸಿದಾಗ ನಾವು ಒಪ್ಪಿಕೊಳ್ಳುವಂತೆ ಒತ್ತಾಯಿಸಿದೆವು" ಎನ್ನುತ್ತಾರೆ ನಾಗರಾಜನ್.

ಈಗ ಸ್ಮಾರಕವಾಗಿರುವ ಈ ಕೊಠಡಿಯಲ್ಲಿ ಕೆಲವು ಪುಸ್ತಕಗಳು ಮತ್ತು ಅವರ ಇನ್ನಿತರ ವಸ್ತುಗಳು ಉಳಿದುಕೊಂಡಿವೆ.

SCROLL FOR NEXT