ಮುಂಬೈ: ದಿಮಾಪುರದಲ್ಲಿ ರೇಪ್ ಆರೋಪಿಗೆ ಜನರು ಮನಬಂದಂತೆ ಥಳಿಸಿರುವ ಪ್ರಕರಣದ ವರದಿಯನ್ನು ಕೇಂದ್ರ ಸರ್ಕಾರವೂ ಕೇಳಿದೆ, ಅದರ ಮೈತ್ರಿ ಪಕ್ಷ ಶಿವಸೇನೆ ಜನರ ಗುಂಪು ನಡೆಸಿದ ಈ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ಮೇಲೆ ಜನಕ್ಕಿರುವ ಆಕ್ರೋಶವನ್ನು ಇದು ತೋರಿಸುತ್ತದೆ ಎಂದಿದೆ.
ಡಿಸೆಂಬರ್ ೧೬ ರಂದು ನಡೆದ ದೆಹಲಿ ಗ್ಯಾಂಗ್ ರೇಪ್ ತಪ್ಪಿತಸ್ಥರಿಗೂ ನಾಗಲ್ಯಾಂಡ್ ನಲ್ಲಿ ನಡೆದ ಹಾಗೇ ಆಗಬೇಕಿತ್ತು ಎಂದಿದೆ ಶಿವಸೇನೆ.
"ಬಾಂಗ್ಲಾದೇಶದಿಂದ ಅನಧಿಕೃತವಾಗಿ ಭಾರತಕ್ಕೆ ನುಸುಳುತ್ತಿರುವವರ ವಿರುದ್ಧ ಮೊದಲಿನಿಂದಲೂ ನಾಗಾಲ್ಯಾಂಡಿನ ಜನ ಪ್ರತಿಭಟಿಸುತ್ತಿದ್ದಾರೆ. ಆದರೆ ಅವರ ಪ್ರತಿಭಟನೆಯನ್ನು ನಿರ್ಲ್ಯಕ್ಷಿಸಲಾಗಿತ್ತು. ಇಂತಹ ಪ್ರತಿಭಟನೆಗಳ ನಡುವೆ ಈ ರೇಪ್ ಘಟನೆ ನಡೆದಿದ್ದು ಜನರು ತಮ್ಮ ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಲೈಂಗಿಕ ಅಪರಾಧಗಳು ಹೆಚ್ಚುತ್ತಿರುವುದರ ವಿರುದ್ಧ ಜನರ ಆಕ್ರೋಶ ಇದು" ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ನುಡಿಯಲಾಗಿದೆ.
ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ವಿರುದ್ಧ ಕಣ್ಣು ಕೂಡ ಮಿಟುಕಿಸದ ಸರ್ಕಾರ ಈ ಪ್ರಕರಣವನ್ನು ಕಾನೂನು ಸುವ್ಯವಸ್ಥೆಯ ಸೋಲು ಎಂದು ಬಣ್ಣಿಸುವುದು ಅಪಹಾಸ್ಯ ಎಂದಿದೆ.