ಪ್ರಧಾನ ಸುದ್ದಿ

ಬಿಗ್ ಬಾಸ್ ಹುಚ್ಚ ವೆಂಕಟ್ ಇಂದು ಬಿಡುಗಡೆ

Srinivasamurthy VN

ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ `ಬಿಗ್ ಬಾಸ್ ವೆಂಕಟ್' ಮಂಗಳವಾರ ಸಂಜೆ  ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಳೆದ ಬುಧವಾರವೇ (ನ. 25) ವೆಂಕಟ್‍ಗೆ ಜಾಮೀನು ಸಿಕ್ಕಿದೆ. ಆದರೆ, ಉದ್ದೇಶಪೂರ್ವಕವಾಗಿ ಅವರನ್ನು ಜೈಲಿನಿಂದ ಹೊರಕ್ಕೆ ಕರೆ ತಂದಿಲ್ಲ. ನ್ಯಾಯಾಲಯದ ಷರತ್ತಿನಂತೆ ವೆಂಕಟ್  ಸೋದರಿ ಶ್ಯೂರಿಟಿ ನೀಡುತ್ತಿದ್ದು ರು.25 ಸಾವಿರ ಬಾಂಡ್ ನೀಡಲಾಗುತ್ತಿದೆ ಎಂದು ವೆಂಕಟ್ ಪರ ವಕೀಲ ಮಂಜುನಾಥ ರಾಮಚಂದ್ರಪ್ಪ ತಿಳಿಸಿದರು. ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವೆಂಕಟ್ ಅವರು ಕ್ಷಣಕ್ಕೊಂದು ರೀತಿ ಮಾತನಾಡುತ್ತಾರೆ. ಅವರ ಬುದ್ಧಿ ಸ್ಥಿಮಿತದಲ್ಲಿರದು.

ಅಂತಹುದರಲ್ಲಿ ಸುದ್ದಿ ವಾಹಿನಿಗಳು ಅವರನ್ನು ಕರೆಸಿ ಮಾತನಾಡಿಸಿದಾಗ ಭಾವೋದ್ವೇಗಕ್ಕೆ ಒಳಗಾಗಿ ಪ್ರಚೋದನೆಯಿಂದಾಗಿ ವೆಂಕಟ್ ಆ ರೀತಿ ಮಾತನಾಡಿರಬಹುದು. ಅದು ತಪ್ಪು. ಹೀಗಾಗಿ  ಜೈಲಿಗೆ ಹೋಗಿದ್ದಾರೆ. ಅವರು ಬಿಡುಗಡೆಯಾದರೂ, ಮತ್ತೆ ಏನಾದರೂ ಮಾತನಾಡಿ ಯಡವಟ್ಟು ಮಾಡಿಕೊಳ್ಳುವ ಭೀತಿ ಇದೆ ಎಂದು ವಕೀಲರು ಕನ್ನಡಪ್ರಭಕ್ಕೆ ತಿಳಿಸಿದರು.

ಹೇಳಿಕೆ ತಂದ ಫಜೀತಿ: ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ ನಂತರ ವಿವಿಧ ಸಂಘಟನೆಗಳು ವೆಂಕಟ್ ಮನೆಗೆ ತೆರಳಿ ಪ್ರತಿಭಟನೆ ನಡೆಸಿದ್ದವು. ಇದರಿಂದ ವೆಂಕಟ್ ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರಿಗೂ ತೀವ್ರ ತೊಂದರೆ ಉಂಟಾಯಿತು. ಜೈಲಿನಿಂದ ಬಿಡುಗಡೆಯಾಗಿ ಬಂದರೆ ಟಿವಿ ವಾಹಿನಗಳ ಜತೆ ಮಾತನಾಡಿ ಮತ್ತೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಸೋದರಿ, ಕುಟುಂಬ ಸದಸ್ಯರು, ಹಿರಿಯರು ಹಾಗೂ ವಕೀಲರೊಂದಿಗೆ ಚರ್ಚೆ ನಡೆಸಿದರು.

ಬಿಡುಗಡೆಯಾಗಿ ಬಂದ ನಂತರ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದರು. ಮಾಧ್ಯಮಗಳಿಂದ ದೂರವಿರಲು ಹಾಗೂ ಮಾನಸಿಕ ಶಾಂತಿ ಕಾಪಾಡಲು ವೆಂಕಟ್ ಬಿಡುಗಡೆಯನ್ನು  ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅವರಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿಲ್ಲ ಎನ್ನುವುದು ಸುಳ್ಳು. ಅವರ ಕುಟುಂಬ ಸದಸ್ಯರು ಮಾತ್ರವಲ್ಲದೇ ಹೊರಗಿನ ಸಾಕಷ್ಟು ಜನ  ಜಾಮೀನು ನೀಡಲು ಮುಂದೆ ಬಂದಿದ್ದಾರೆಂದು ವಕೀಲ ಮಂಜುನಾಥ ರಾಮಚಂದ್ರಪ್ಪ ಹೇಳಿದರು.

SCROLL FOR NEXT