ನವದೆಹಲಿ: ದೇಶದಲ್ಲಿ ಕೋಮು ಸಾಮರಸ್ಯವನ್ನು ಹಾಳುಗೆಡವುವರ ಮೇಲೆ ಅತಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಹೇಳಿದ್ದಾರೆ. ಬೀಫ್ ತಿಂದರು ಎಂಬ ವದಂತಿಯ ಮೇರೆಗೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಒಬ್ಬನನ್ನು ಕೊಂದ ಘಟನೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಸಮಯದಲ್ಲಿ ಗೃಹಮಂತ್ರಿ ಈ ಎಚ್ಚರಿಕೆ ನೀಡಿದ್ದಾರೆ.
"ರಾಜ್ಯ ಸರ್ಕಾರವೇ ಆಗಲಿ, ಕೇಂದ್ರ ಸರ್ಕಾರವೇ ಆಗಲಿ, ದೇಶದಲ್ಲಿ ಕೋಮು ಸಾಮರಸ್ಯವನ್ನು ಹಾಳುಗೆಡವುವರ ಮೇಲೆ ಅತಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಬೀಫ್ ತಿಂದರು ಎಂಬ ವದಂತಿಯ ಮೇರೆಗೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಸ್ಲಿಂ ಸಮುದಾಯದ ಒಬ್ಬನನ್ನು ಕೊಂದ ಘಟನೆ ಬಗ್ಗೆ ಉಂಟಾಗಿರುವ ಉದ್ವಿಘ್ನತೆ ಬಗ್ಗೆ ಪ್ರಶ್ನಿಸಿದಾಗ ಗೃಹ ಮಂತ್ರಿಯವರು ಹೀಗೆ ಉತ್ತರಿಸಿದ್ದಾರೆ.
ನೆನ್ನೆಯಷ್ಟೇ ಈ ಘಟನೆಯನ್ನು ದುರದೃಷ್ಟಕರ ಎಂದಿದ್ದ ಗೃಹಮಂತ್ರಿ ಕೋಮು ಸ್ವಾರಸ್ಯ ಎಲ್ಲರ ಕರ್ತವ್ಯ ಎಂದು ಹೇಳಿದ್ದರು. ಅಲ್ಲದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಹಾಗು ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಅಕ್ಟೋಬರ್ ೧ ರಂದು ಪತ್ರ ಬರೆದಿತ್ತು.