ಪ್ರಶ್ನೆ ಪತ್ರಿಕೆಗಳನ್ನು ಲಾರಿಯಿಂದ ಕೆಳಗಿಳಿಸುತ್ತಿರುವುದು
ಧಾರವಾಡ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗಳನ್ನು ಧಾರವಾಡ ಜಿಲ್ಲಾ ಖಜಾನೆಯಲ್ಲಿಟ್ಟು, ಇಲ್ಲಿಂದಲೇ ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ಮರುಪರೀಕ್ಷೆ ನಿಗದಿಯಾಗಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನಿ ಪತ್ರಿಕೆ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆಗಳನ್ನು ಧಾರವಾಡ ಖಜಾನೆಯಲ್ಲಿ ಭದ್ರವಾಗಿಟ್ಟತ್ತು.
ಪ್ರತಿ ಬಾರಿ ಪ್ರಶ್ನೆಪತ್ರಿಕೆಗಳನ್ನು ಬೆಂಗಳೂರಿನಲ್ಲಿಟ್ಟು ಅಲ್ಲಿಂದ ಎಲ್ಲ ಜಿಲ್ಲೆಗಳಿಗೆ ರವಾನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಧಾರವಾಡ ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳ ಬಾಕ್ಸ್ಗಳನ್ನು ಇಡಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಿಐಎಸ್ಎಫ್ ಭದ್ರತೆ: ಮಹಾರಾಷ್ಟ್ರದಿಂದ ಬಂದ ಪ್ರಶ್ನೆಪತ್ರಿಕೆಗಳಿದ್ದ 2 ಟ್ರಕ್ಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಭದ್ರತೆ ಕಲ್ಪಿಸಲಾಗಿತ್ತು. ಪ್ರಶ್ನೆಪತ್ರಿಕೆಗಳ ಬಾಕ್ಸ್ಗಳನ್ನು ಖಜಾನೆ ಕಟ್ಟಡದೊಳಗೆ ಸಾಗಿಸುವವರೆಗೂ ಶಸ್ತ್ರಸಜ್ಜಿತ ಪಡೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.
ಜಿಲ್ಲಾ ಖಜಾನೆಯಲ್ಲಿಡಲಾಗಿದ್ದ ಪ್ರಶ್ನೆಪತ್ರಿಕೆಗಳ ಬಾಕ್ಸ್ ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಇಂದು ಬೆಳಗ್ಗೆ ರವಾನೆ ಮಾಡಲಾಗಿದ್ದು, ಇದಕ್ಕಾಗಿ ಭಾನುವಾರ ಸಂಜೆಯೇ ವಿಆರ್ಎಲ್ ಲಾಜಿಸ್ಟಿಕ್ಸ್, ಮಾರುತಿ ಪಾರ್ಸಲ್ ಕ್ಯಾರಿಯರ್ಸ್ (ಎಂಪಿಸಿ), ಅಕ್ಷಯ ಪಾತ್ರ, ಡಿಟಿಡಿಸಿ ಸಂಸ್ಥೆಗಳ ಸುಭದ್ರ ಕವಚವಿರುವ ವಾಹನಗಳನ್ನು ತರಿಸಲಾಗಿತ್ತು. ಆಯಾ ಜಿಲ್ಲೆ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಉಸ್ತುವಾರಿಯಲ್ಲಿ ವಾಹನಗಳು ತೆರಳಲಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos