ನವದೆಹಲಿ: ಖಟ್ಮಂಡುವಿನಲ್ಲಿ ಮಂಗಳವಾರ ಕೊನೆಯುಸಿರೆಳೆದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಹೋಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಈ ನಷ್ಟದ-ನೋವಿನ ಸಮಯದಲ್ಲಿ ನೇಪಾಳದ ಜೊತೆಗಿದ್ದೇವೆ. ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಹೋಗಲಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಮುಂದಾಳತ್ವದ ನಿಯೋಗ ನೇಪಾಳದ ಖಟ್ಮಂಡುವಿನಲ್ಲಿ ಸಂಜೆ ೫ ಕ್ಕೆ ಇಳಿದು ನಂತರ ತಡರಾತ್ರಿಯಲ್ಲಿ ನವದೆಹಲಿಗೆ ಹಿಂದಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್, ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಹಾಗೂ ಓಲಿಯವರ ವಿದೇಶಾಂಗ ಸಂಬಂಧಗಳ ಸಲಹಾಧಿಕಾರಿ ಗೋಪಾಲ್ ಖನಲ್ ಅವರನ್ನು ಭೇಟಿಯಾಗಲಿದ್ದಾರೆ.
ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಮತ್ತು ಸಿಪಿಐ(ಮಾರ್ಕ್ಸಿಸ್ಟ್) ಮುಖಂಡ ಸೀತಾರಾಮ್ ಯೆಚೂರಿ, ಸುಷ್ಮಾ ಸ್ವರಾಜ್ ಅವರ ಜೊತೆ ಅಂತ್ಯಸಂಕಾರಕ್ಕೆ ತೆರಳಲಿದ್ದಾರೆ.
ಬಾಗ್ಮತಿ ನದಿಯ ತಟದಲ್ಲಿರುವ ಪಾಶುಪತಿನಾಥ ದೇವಾಲಯದಲ್ಲಿ ಕೊಯಿರಾಲ ಅವರ ಕೊನೆಯ ವಿಧಿಗಳು ಜರುಗಲಿವೆ. ನೇಪಾಳ ಸರ್ಕಾರ ಬುಧವಾರ ಸಾರ್ವಜನಿಕ ರಜೆ ಘೋಷಿಸಿದೆ.