ಅರುಣಾಚಲ ಪ್ರದೇಶ ಮುಖ್ಯಮಂತ್ರಿ ನಬಾಮ್ ತೂಕಿ
ನವದೆಹಲಿ: ನರೇಂದ್ರ ಮೋದಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿರುವ ಆದೇಶದಲ್ಲಿ, ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜಕೋವಾ ಅವರ ನಿರ್ಣಯವನ್ನು (ರಾಷ್ಟ್ರಪತಿ ಆಳ್ವಿಕೆ) ರದ್ದುಗೊಳಿಸಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ನಬಾಮ್ ತೂಕಿ ಹಿಂದಿರುಗಲು ಅವಕಾಶ ನೀಡುವಂತೆ ಪರಮೋಚ್ಛ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶ ಜೆ ಎಸ್ ಖೇಕರ್ ಮುಂದಾಳತ್ವದ ವಿಭಾಗೀಯ ಪೀಠ ಕೈಗೊಂಡ ಒಮ್ಮತದ ನಿರ್ಣಯದಲ್ಲಿ ಡಿಸೆಂಬರ್ 15, 2015 ಕ್ಕೆ ಮುಂಚಿತವಾಗಿ ಇದ್ದ ಸ್ಥಿತಿಯನ್ನು ಮರುಸ್ಥಾಪಿಸುವಂತೆ ಆದೇಶಿಸಿದೆ.
ಖೇಕರ್ ಆದೇಶವನ್ನು ಒಪ್ಪಿ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ಮದನ್ ಬಿ ಲೋಕುರ್ ಹೆಚ್ಚುವರಿ ಕಾರಣಗಳನ್ನು ನೀಡಿ ಮುಖ್ಯಮಂತ್ರಿ ಹಿಂದಿರುಗಲು ಹಾದಿ ಸುಗಮಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ, ಪ್ರಜಾಪ್ರಭುತ್ವವನ್ನು ರಕ್ಷಿಸಿದೆ: ತೂಕಿ
ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ ವ್ಯಕ್ತಪಡಿಸಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಹಿಂದಿರುಗಲಿರುವ ನಬಾಮ್ ತೂಕಿ ಇದು ಐತಿಹಾಸಿಕ ತೀರ್ಪು ಎಂದಿದ್ದಾರೆ. "ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ. ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವ ಉಳಿಸಲು ಇದು ಮಾರ್ಗದರ್ಶನ ನೀಡಿದೆ" ಎಂದು ಸರ್ಕಾರವನ್ನು ಕೆಳಗಿಳಿಸುವ ಮುಂಚಿತವಾಗಿ ಮುಖ್ಯಮಂತ್ರಿಯಾಗಿದ್ದ ತೂಕಿ ಹೇಳಿದ್ದಾರೆ.
"ಬಿಜೆಪಿ ಮುಖಂಡರು ಕಾನೂನುಬಾಹಿರವಾಗಿ ಚುನಾಯಿತ ಸರ್ಕಾರವನ್ನು ಕೆಳಗಿಳಿಸಲು ಪ್ರಯತ್ನಿಸಿದರು... ಅಪೆಕ್ಸ್ ಕೋರ್ಟ್ ತೀರ್ಪು ಅದನ್ನು ಅಮಾನ್ಯಗೊಳಿಸಿದೆ" ಎಂದು ತೂಕಿ ಹೇಳಿದ್ದಾರೆ.
ಈ ಹಿಂದೆ ಉತ್ತರಾಖಾಂಡ್ ನಲ್ಲೂ ಸರ್ಕಾರವನ್ನು ವಜಾಗೊಳಿಸಿದ್ದ ಕೇಂದ್ರ ಸರ್ಕಾರದ ನಡೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳು ಖಂಡಿಸಿ ಅಲ್ಲಿನ ಸರ್ಕಾರ ಹಿಂದಿರುಗಲು ಆದೇಶ ನೀಡಿದ್ದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos