ತಿರುನೆಲ್ವೇಲಿ: ಚೆನೈ ಐ ಟಿ ಉದ್ಯೋಗಿ ಸ್ವಾತಿ ಕೊಲೆಯ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಆರೋಪಿ ರಾಮ್ ಕುಮಾರ್ ಅವರ ತಂದೆ ಪರಮಶಿವನ್ ತಿರುನೆಲ್ವೇಲಿಯ ಸೆಂಗೋಟ್ಟಿ ಪೊಲೀಸ್ ಠಾಣೆಗೆ ಮಂಗಳವಾರ ಪೆಟಿಶನ್ ನೀಡಿದ್ದು, ತಮ್ಮ ಮಗನನ್ನು ಪೊಲೀಸರು ಹಿಡಿಯುವಾಗ ಅವನ ಕತ್ತು ಕೊಯ್ದರು ಎಂದು ಆರೋಪಿಸಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಈ ಅರ್ಜಿಯಲ್ಲಿ ಪರಮಶಿವನ್ ಹೇಳಿರುವಂತೆ, ಜುಲೈ 1 ರ ರಾತ್ರಿ ಸೆಂಗೋಟ್ಟೈ ಬಳಿಯ ಮೀನಾಕ್ಷಿಪುರಂನ ತಮ್ಮ ಮನೆಯ ಕದವನ್ನು ಟೀಶರ್ಟ್ ಹಾಕಿದ್ದ ಇಬ್ಬರು ಬಡಿದರು. ನಾನು ಕದ ತೆರೆದಾಗ ಅವರು ಪರಿಚಯಿಸಿಕೊಂಡು ಇದು ಮುತ್ತುಕುಮಾರ್ ಅವರ ಮನೆಯೇ ಎಂದು ಕೇಳಿದರು. ಆಗ ಪರಮಶಿವನ್ ತಮ್ಮ ಮಗನ ಹೆಸರು ರಾಮಕುಮಾರ್ ಎಂದು ತಿಳಿಸಿದಾಗ ಹಿಂಬದಿ ಬಾಗಿಲಿನಿಂದ ಬಂದ ಕೆಲವು ಪೊಲೀಸರು ನನ್ನ ಮಗ ಕತ್ತು ಕೊಯ್ದುಕೊಂಡಿದ್ದಾನೆ ಎಂದು ತಿಳಿಸಿದರು ಎಂದು ಹೇಳಿದ್ದಾರೆ.
ಆಗ ತಮ್ಮ ಕುಟುಂಬ ಸದಸ್ಯರು ಹಿಂಭಾಗಕ್ಕೆ ತೆರಳಿದಾಗ ರಾಮ್ ಕುಮಾರ್ ಕತ್ತಿಗೆ ಗಾಯವಾಗಿತ್ತು ಹಾಗೂ ಪೊಲೀಸ್ ಒಬ್ಬರು ಅವನನ್ನು ಹಿಡಿದಿದ್ದರು ಎಂದು ತಿಳಿಸಿದ್ದಾರೆ. "ಪೊಲೀಸ್ ಒಬ್ಬರ ಕೈಮೇಲೆ ರಕ್ತದ ಕಲೆ ಇತ್ತು" ಎಂದು ಕೂಡ ಅವರು ಹೇಳಿದ್ದಾರೆ.