ಪ್ರಧಾನ ಸುದ್ದಿ

ಕೇರಳ ವಿಪಕ್ಷ ನಾಯಕನಿಗೆ ಕೊಲೆ ಬೆದರಿಕೆ; ತನಿಖೆ ಮಾಡಲಿದ್ದೇವೆ ಎಂದ ಮುಖ್ಯಮಂತ್ರಿ

Guruprasad Narayana
ತಿರುವನಂತಪುರಂ: ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಅವರಿಗೆ ಕೊಲೆ ಬೆದರಿಕೆ ಇದೆ ಎಂಬ ಆರೋಪವನ್ನು ತನಿಖೆ ಮಾಡಲಿದ್ದೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದ್ದಾರೆ. 
"ಕಳೆದ ಎರಡು ದಿನಗಳಿಂದ ನನಗೆ ರವಿ ಪೂಜಾರಿಯಿಂದ ಕರೆ ಬರುತ್ತಿದೆ ಆದರೆ ನಾನು ಅವುಗಳನ್ನು ಉಪೇಕ್ಷಿಸಿದ್ದೇನೆ. ಆದರೆ ನನ್ನ ದೂರವಾಣಿಗೆ ಇಂದು ಸಂದೇಶ ಬಂದಿದೆ ಅದಕ್ಕೆ ಈ ವಿಷಯ ಇಲ್ಲಿ ಎತ್ತುತ್ತಿದ್ದೇನೆ" ಎಂದು ರಮೇಶ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉದ್ದಿಮೆದಾರ ಮೊಹಮದ್ ನಿಜಾಮ್ ಬಗ್ಗೆ ಚರ್ಚಿಸಬಾರದು ಎಂದು ದೂರವಾಣಿ ಕರೆ ಮಾಡಿದವನು ಹೇಳಿದ್ದಾನೆ ಎಂದು ಕೂಡ ಅವರು ಆರೋಪಿಸಿದ್ದಾರೆ. 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಟಿ ರಾಧಾಕೃಷ್ಣನ್ ಕೂಡ ಆರೋಪಿಸಿದ್ದರು. 
"ನಿಜಾಮ್ ನ ಗುರಿ ನೀವೇಕೆ (ರಮೇಶ್) ಎಂದು ನನಗಿನ್ನೂ ಅರ್ಥವಾಗುತ್ತಿಲ್ಲ. ಆದರೆ ಈಗ ಈ ವಿಷಯ ಎತ್ತಿರುವುದರಿಂದ ಪೊಲೀಸರು ತನಿಖೆ ನಡೆಸಲಿದ್ದಾರೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ" ಎಂದು ವಿಜಯನ್ ಹೇಳಿದ್ದಾರೆ. 
ತಮಗೆ ಬಂದಿರುವ ಬೆದರಿಕೆ ಕರೆಗಳ ಬಗ್ಗೆ ರಮೇಶ್ ವಿವರವಾಗಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. 
ಡಿಸೆಂಬರ್ 20 2014 ರಂದು ಕಾವಲುಗಾರ ಗೇಟ್ ತೆಗೆಯಲು ತಡ ಮಾಡಿದನೆಂದು 47 ವರ್ಷದ ಚಂದ್ರ ಬೋಸ್ ಮೇಲೆ ಹಮ್ಮರ್ ಕಾರು ಹತ್ತಿಸಿದ್ದ ನಿಜಾಮ್, ಬೋಸ್ ಸಾಯುವವರೆಗೂ ಥಳಿಸಿದ್ದರು. 
48 ದಿನಗಳ ಕಾಲು ಜೀವನ್ಮರಣದ ಮಧ್ಯ ಹೋರಾಡಿದ್ದ ಬೋಸ್, ಕಳೆದ ವರ್ಷ ಫೆಬ್ರವರಿ 15 ರಂದು ಮೃತರಾಗಿದ್ದರು. 
ನಿಜಾಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ತ್ರಿಶೂರ್ ನ್ಯಾಯಾಲಯ ಅವರಿಗೆ 7 ಲಕ್ಷ ದಂಡ ಹಾಕಿ ಜೀವಾವಧಿ ಶಿಕ್ಷೆ ನೀಡಿತ್ತು. ಈ ವಿವಾದಾತ್ಮಕ ಉದ್ದಿಮೆದಾರನನ್ನು ಕಣ್ಣೂರು ಜೈಲಿನಲ್ಲಿ ಇರಿಸಲಾಗಿದೆ. 
ನಿಜಾಮ್ ಜೈಲಿನಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದಾನೆ ಮತ್ತು ಜೈಲಿನಿಂದಲೇ ತನ್ನ ವ್ಯವಹಾರ ನಡೆಸುತ್ತಿದ್ದಾನೆ ಎಂಬ ವಿಷಯ ಹೊರಬಿದ್ದಾಗ ಕಳೆದ ವಾರ ಮೂವರು ಜೈಲು ಅಧಿಕಾರಿಗಳನ್ನು ವಜಾ ಮಾಡಲಾಗಿತ್ತು. 
SCROLL FOR NEXT