ಲಖನೌ: ಆಂಟಿ-ರೋಮಿಯೋ ಸ್ಕ್ವಾಡ್ ವಿರುದ್ಧವಾಗಿ ನೀಡಿದ ಪ್ರತಿಕ್ರಿಯೆಯಲ್ಲಿ ಭಗವಾನ್ ಶ್ರೀಕೃಷ್ಣನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ದೂರಿ ಹಲವು ಹಿಂದುತ್ವ ಸಂಘಟನೆಗಳು ಪ್ರತಿಭಟಿಸಿದ ಬೆನ್ನಲ್ಲೇ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಕ್ಷಮೆ ಯಾಚಿಸಿದ್ದಾರೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಚಿಸಿರುವ ಆಂಟಿ ರೋಮಿಯೋ ಪಡೆ, ಪ್ರೀತಿಯ ಸದ್ಭಾವನೆಗೆ ವಿರೋಧಿಯಾಗಿದ್ದು, ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ ಭಗವಾನ್ ಕೃಷ್ಣನನ್ನು ಕೂಡ ಉತ್ತರ ಪ್ರದೇಶ ಸರ್ಕಾರ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ಇದಕ್ಕೆ ಹಿಂದುತ್ವ ಸಂಘಟನೆಗಳು ಉಗ್ರವಾಗಿ ಪ್ರತಿಭಟಿಸಿದ್ದವು.
ಮಂಗಳವಾರ ಇದಕ್ಕೆ ಸ್ಪಷ್ಟಿಕರಣ ನೀಡಿ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್ "ರೋಮಿಯೋ ಸ್ಕ್ವಾಡ್ ಮತ್ತು ಕೃಷ್ಣನ ಬಗೆಗಿನ ನನ್ನ ಟ್ವೀಟ್ ಗಳು ಸರಿಯಾಗಿ ರಚಿಸಿರಲಿಲ್ಲ ಎಂದು ನನಗೆ ಈಗ ಅರ್ಥವಾಗಿದೆ ಮತ್ತು ಇದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕೂಡ ತಿಳಿದಿದೆ. ಇದಕ್ಕೆ ನಾನು ಕ್ಷಮೆ ಯಾಚಿಸಿ ಅವುಗಳನ್ನು ತೆಗೆದು ಹಾಕಿದ್ದೇನೆ" ಎಂದಿದ್ದಾರೆ.
ಭಾನುವಾರ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್ "ರೋಮಿಯೋ ಒಬ್ಬಳನ್ನಷ್ಟೇ ಪ್ರೀತಿಸಿದ್ದ, ಆದರೆ ಹುಡುಗಿಯರನ್ನು ಚುಡಾಯಿಸುವುದರಲ್ಲಿ ಕೃಷ್ಣನದ್ದು ದಂತಕತೆ. ಆದಿತ್ಯನಾಥ್ ರಚಿಸಿರುವ ಪಡೆಗೆ ಆಂಟಿ-ಕೃಷ್ಣ ಸ್ಕ್ವಾಡ್ ಎಂದು ಹೆಸರಿಸಲು ಧೈರ್ಯ ಇದೆಯೇ?" ಎಂದು ಬರೆದಿದ್ದರು.
ಪ್ರಶಾಂತ್ ಭೂಷಣ್ ಅವರ ನೊಯ್ದಾ ನಿವಾಸದ ಎದುರು ನೆನ್ನೆ ಕೆಲವರು ಪ್ರತಿಭಟನೆ ನಡೆಸಿದ್ದರು. ಪ್ರತಾಪಘರ್, ಫಿರೋಜಾಬಾದ್ ಮತ್ತು ಹತ್ರಸ್ ನಲ್ಲಿ ಕೂಡ ಪ್ರತಿಭಟನೆಗಳು ನಡೆದಿದ್ದವು.
ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಪೊಲೀಸರು ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದಿದ್ದರು. ಫಿರೋಜಾಬಾದ್ ನಲ್ಲಿ ಭಜರಂಗದಳ ಈ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರ ತಲೆದಂಡಕ್ಕೆ ೧ ಲಕ್ಷ ರೂ ಘೋಷಿಸಿದ್ದರಿಂದ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಭೂಷಣ್ ಅವರ ತಲೆ ಕಡಿದು ತಂದವರಿಗೆ ೧ ಲಕ್ಷ ರೂ ನೀಡುವುದಾಗಿ ಫಿರೋಜಾಬಾದ್ ಭಜರಂಗ ದಳದ ನಗರ ಸಂಚಾಲಕ ಆಚ್ಮನ್ ಉಪಾಧ್ಯ ಘೋಷಿಸಿದ್ದರು.
ಮಥುರಾದಲ್ಲೂ ಪ್ರಶಾಂತ್ ಭೂಷಣ್ ವಿರುದ್ಧ ದೂರು ನೀಡಿದ್ದ ಸಾಧುಗಳು ವೃಂದಾವನದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲಹಾಬಾದ್ ನಲಿ ವಕೀಲರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ಘೋಷಿಸಿದ್ದರೆ, ಪ್ರತಾಪ್ಘರ್ ನಲ್ಲಿ ವಿ ಎಚ್ ಪಿ ಕಾರ್ಯಕ್ರತರು ಪ್ರಶಾಂತ್ ಭೂಷಣ್ ಅವರ ಪ್ರತಿಕೃತಿಯನ್ನು ದಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos