ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್
ನವದೆಹಲಿ: ಬಿಜೆಪಿ ವಿರೋಧಿ ಮೈತ್ರಿಕೂಟದ ಮಾತುಕತೆಯ ಬಗ್ಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಅವರ ಹೇಳಿಕೆಗಳನ್ನು ಟೀಕಿಸಿರುವ ಜನತಾ ದಳ ಸಂಯುಕ್ತ ಪಕ್ಷ, ಮುಲಾಯಂ ಗತದಲ್ಲಿ ಬದುಕುತ್ತಿದ್ದು, ಅವರಿಗೆ ಕೇಸರಿ ಪಕ್ಷದ ಸದ್ಯದ ಪರಿಸ್ಥಿತಿ ಗೊತ್ತಿಲ್ಲ ಎಂದಿದ್ದಾರೆ.
"ಮುಲಾಯಂ ಸಿಂಗ್ ಗತದಿನಗಳಲ್ಲಿ ಬದುಕಿದ್ದಾರೆ. ಬಿಜೆಪಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ. ಈಗಿರುವುದು ಹಳೆಯ ಬಿಜೆಪಿ ಅಲ್ಲ, ೨೦೧೭ರ ಬಿಜೆಪಿ ಪಕ್ಷ" ಎಂದು ಜೆಡಿಯು ಮುಖಂಡ ಕೆ ಸಿ ತ್ಯಾಗಿ ಹೇಳಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದ ಜೊತೆಗೆ ಸಮಾಜವಾದಿ ಪಕ್ಷ ಕೆಲಸ ಮಾಡಲು ಸಿದ್ಧವಿದೆ ಎಂಬ ಸಲಹೆಯನ್ನು ಮುಲಾಯಂ ನೆನ್ನೆ ತಿರಸ್ಕರಿಸಿದ್ದರು.
"ನಾವು ಸ್ವಂತವಾಗಿಯೇ ಬಲವಾಗಿದ್ದೇವೆ" ಎಂದು ಬಿಜೆಪಿ ವಿರುದ್ಧ ೨೦೧೯ರ ಚುನಾವಣೆಯಲ್ಲಿ ಮಹಾ ಮೈತ್ರಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಿರಿಯ ಮುಖಂಡ ಪ್ರತಿಕ್ರಿಯಿಸಿದ್ದರು.
ಇದಕ್ಕೂ ಮುಂಚಿತವಾಗಿ ಶನಿವಾರ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮಹಾ ಮೈತ್ರಿ ಬೇಕು ಮತ್ತು ನಮ್ಮ ಪಕ್ಷ ಅದರ ಪರವಾಗಿದೆ ಎಂದಿದ್ದರು.
"ಪ್ರಜಾಪ್ರಭುತ್ವ ಉಳಿಸಲು" ಸಮಾನ ಮನಸ್ಕ ಪಕ್ಷಗಳ ಜೊತೆಗೆ ಕೆಲಸ ಮಾಡಲು ಸಿದ್ಧ ಎಂದು ಬಿ ಎಸ್ ಪಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದರ ನಂತರ ಅಖಿಲೇಶ್ "ಮಹಾ ಮೈತ್ರಿಯ ಅವಶ್ಯಕತೆ ಇದೆ. ನಾವು ಅದರ ಪರವಾಗಿದ್ದೇವೆ" ಎಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos