ಪ್ರಧಾನ ಸುದ್ದಿ

ನಾನು ತಪ್ಪಿಸಿಕೊಂಡು ಬಂದೆ, ಎಐಎಡಿಎಂಕೆ ಶಾಸಕನಿಂದ ಪೊಲೀಸರಿಗೆ ದೂರು

Lingaraj Badiger
ಚೆನ್ನೈ: ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ನಾಟಕ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಂದ ಹೈಜಾಕ್ ಆಗಿದ್ದ ಪಕ್ಷದ ಶಾಸಕರೊಬ್ಬರು ಶುಕ್ರವಾರ ತಪ್ಪಿಸಿಕೊಂಡು ಬಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಶ್ರೀವೈಕುಂದಂ ಶಾಸಕ ಎಸ್ ಪಿ ಶಣ್ಮುಗನಾಥನ್ ಅವರು, ತಾವು ಶಶಿಕಲಾ ಅವರ ಖಾಸಗಿ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಬಂದಿದ್ದು, ಇತರೆ ಶಾಸಕರನ್ನು ಸಹ ಅಕ್ರಮ ಬಂಧನದಿಂದ ಮುಕ್ತಗೊಳಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಳೆದ ಬುಧವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಲ್ಲಾ ಶಾಸಕರು ಸೇರಿದ್ದೇವು. ಅಲ್ಲಿಂದ ಒಂದು ಜೊತೆ ಬಟ್ಟೆ ತೆಗೆದುಕೊಳ್ಳುವುದಕ್ಕಾಗಿ ಶಾಸಕರ ಭವನಕ್ಕೆ ಬಸ್ ನಲ್ಲಿ ಕರೆದೊಯ್ಯಲಾಯಿತು. ಬಳಿಕ ಹಿರಿಯ ನಾಯಕ, ಮಾಜಿ ಸಚಿವ ಎಡಪ್ಪಡಿ ಪಳನಿಸಾಮಿ ಅವರ ನಿವಾಸಕ್ಕೆ ಕರೆದೊಯ್ದು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು, ನಿಗೂಢ ಸ್ಥಳಕ್ಕೆ ಕರೆದೊಯ್ದರು ಎಂದು ಶಣ್ಮುಗನಾಥನ್ ಅವರು ಆರೋಪಿಸಿದ್ದಾರೆ.
ಶಶಿಕಲಾ ಸೂಚನೆಯಂತೆ ಶಾಸಕರನ್ನು ಅಕ್ರಮ ಬಂಧನದಲ್ಲಿರಿಸಿದ್ದು, ಅವರ ಖಾಸಗಿ ಭದ್ರತಾ ಸಿಬ್ಬಂದಿ ಯಾವ ಒಬ್ಬ ಶಾಸಕರಿಗೂ ಮುಕ್ತವಾಗಿ ಓಡಾಡಲು ಬಿಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
SCROLL FOR NEXT