ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದು, ಸರ್ಕಾರಿ ಕಚೇರಿಯಲ್ಲಿರುವ ಅವರ ಫೋಟೋಗಳನ್ನು ತೆಗೆಯಬೇಕು ಮತ್ತು ಅವರ ಹೆಸರಿನಲ್ಲಿರುವ ಸರ್ಕಾರಿ ಯೋಜನೆಗಳ ಹೆಸರು ಬದಲಿಸಬೇಕು ಎಂದು ಪ್ರತಿಪಕ್ಷ ನಾಯಕ, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರು ಆಗ್ರಹಿಸಿದ್ದಾರೆ.
ತೆರಿಗೆದಾರರ ಹಣವನ್ನು ಜಯಲಲಿತಾ ಅವರ ಜನ್ಮದಿನ (ಫೆಬ್ರವರಿ 24) ಆಚರಿಸಲು ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಟಾಲಿನ್ ಅವರು, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ದೋಷಿ. ಈಗಾಗಲೇ ಅವರ ಹೆಸರಿನಲ್ಲಿ ಸರ್ಕಾರಿ ಯೋಜನೆಗಳಿವೆ. ಇನ್ನು ಮುಂದೆ ಸರ್ಕಾರ ಜಯಲಲಿತಾ ಹೆಸರನ್ನು ಯಾವುದೇ ಯೋಜನೆಗೂ ಇಡಬಾರದು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿ, ಸ್ಥಳೀಯ ಸಂಸ್ಥೆಗಳ ಕಚೇರಿ ಹಾಗೂ ಕಾರ್ಯಾಲಯದಲ್ಲಿ ಇರುವ ಜಯಲಲಿತಾ ಫೋಟೋಗಳನ್ನು ಕೂಡಲೇ ತೆಗೆಯಬೇಕು. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇವೆ. ಈಗಾಗಲೇ ಸರ್ಕಾರದ ಮುಖ್ಯಕಾರ್ಯದರ್ಶಿ ಗಿರಿಜಾ ವೈದ್ಯನಾಥನ್ ಅವರ ಗಮನಕ್ಕೆ ಈ ವಿಚಾರ ತಂದಿದ್ದೇವೆ. ಅದನ್ನು ಅವರು ಗಮನಿಸುವುದಾಗಿ ಹೇಳಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಜಯಲಲಿತಾ 69ನೇ ಜನ್ಮದಿನದ ಪ್ರಯುಕ್ತ ಸರ್ಕಾರದಿಂದ ಜಾಹೀರಾತು ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಸ್ಟಾಲಿನ್, ಅದೇ ದಿನ ಮರ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಇತರ ಸಚಿವರು ಹಾಗೂ ಮುಖ್ಯಕಾರ್ಯದರ್ಶಿ ಅದರಲ್ಲಿ ಭಾಗವಹಿಸಿದ್ದನ್ನು ಟೀಕಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos