ನವದೆಹಲಿ: ವೈದ್ಯಕೀಯ ಸಮಿತಿಯ ವರದಿಯ ಆಧಾರದ ಮೇಲೆ, ಆನುವಂಶಿಕ ಖಾಯಿಲೆಯ ಅಪಾಯ ಎದುರಿಸುತ್ತಿರುವ ಭ್ರೂಣವನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರ ಮನವಿಗೆ ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಡೌನ್ ಸಿಂಡ್ರೋಮ್ ನಿಂದ ನರಳುತ್ತಿರುವ ೨೩ ವಾರದ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವಂತೆ ೩೭ ವರ್ಷದ ಮಹಿಳೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಗರ್ಭಿಣಿ ಅಥವಾ ಮಗುವಿನ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂಬ ವರದಿಯ ಆಧಾರದ ಮೇಲೆ ಕೋರ್ಟ್ ಇದಕ್ಕೆ ನಿರಾಕರಿಸಿದೆ.
ಈಗ ೨೬ ವಾರಗಳಾಗಿರುವ ಭ್ರೂಣ ಉಳಿದುಕೊಳ್ಳುವ ಎಲ್ಲ ಸಾಧ್ಯತೆಯಿಂದ ಎಂಬ ವರದಿಯನ್ನು ಉಲ್ಲೇಖಿಸಿ ನ್ಯಾಯಾಧೀಶ ಎಸ್ ಎ ಬಾಬ್ದೆ ಮತ್ತು ನ್ಯಾಯಾಧೀಶ ಎಲ್ ನಾಗೇಶ್ವರ್ ರಾವ್ ಒಳಗೊಂಡ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.
"ಇಂತಹ ಪರಿಸ್ಥಿತಿಯಲ್ಲಿ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವುದಕ್ಕೆ ಸಾಧ್ಯತೆ ಇಲ್ಲ" ಎಂದು ಪೀಠ ಹೇಳಿದೆ.
ವೈದ್ಯಕೀಯ ವರದಿಯ ಪ್ರಕಾರ "ಈ ಗರ್ಭ ಮುಂದುವರೆದರೆ ತಾಯಿಗೆ ಯಾವುದೇ ಅಪಾಯವಿಲ್ಲ. ಆದರೆ ಭ್ರೂಣಕ್ಕೆ ಸಂಬಂಧಿಸಿದಂತೆ ಡೌನ್ ಸಿಂಡ್ರೋಮ್ ನಿನ ಹುಟ್ಟುವ ಕೂಸುಗಳಿಗೆ ಮಾನಸಿಕ ಹಾಗು ದೈಹಿಕ ನ್ಯೂನ್ಯತೆಯ ಸವಾಲುಗಳು ಇರುತ್ತವೆ" ಎಂದು ಕೋರ್ಟ್ ಹೇಳಿದೆ.
ಆದರೆ ವರದಿ ಸ್ಪಷ್ಟವಾಗಿ (ಬಹುಷಃ ಅದನ್ನು ಹೇಳಲು ಸಾಧ್ಯವಿಲ್ಲವೇನೋ) ಈ ಭ್ರೂಣಕ್ಕೆ ಮಾನಸಿಕ ಮತ್ತು ದೈಹಿಕ ನ್ಯೂನ್ಯತೆಗಳಿವೆ ಎಂದು ಹೇಳಲು ಸಾಧ್ಯವಾಗಿಲ್ಲ ಎಂದು ಕೂಡ ಪೀಠ ತಿಳಿಸಿದೆ.
ಹುಟ್ಟುವ ಮಗುವಿಗೆ ತೀವ್ರ ಮಾನಸಿಕ ಮತ್ತು ದೈಹಿಕ ನ್ಯೂನ್ಯತೆಗಳು ಇರುವ ಅಪಾಯಗಳಿವೆ ಎಂದು ವೈದ್ಯಕೀಯ ವರದಿ ಹೇಳಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ಕೋರಿ ಅರ್ಜಿದಾರರ ಪರ ವಕೀಲ ಕಾಲಿನ್ ಗೋನ್ಸ್ಲೇವ್ಸ್ ವಾದ ಮಾಡಿದ್ದರು.
ತಾವು ಗರ್ಭಪಾತದ ಪರವಾಗಿಲ್ಲ ಎಂದು ಕೇಂದ್ರ ಸರ್ಕಾರ ಕೂಡ ಮಹಿಳೆಯ ಮನವಿಯನ್ನು ನಿರಾಕರಿಸಿತ್ತು. ತಾಯಿ ತೀವ್ರ ಮಾನಿಸಿಕ ನ್ಯೂನ್ಯತೆಯುಳ್ಳ ಮಗುವನ್ನು ಸಾಕಬೇಕು ಎಂಬುದರ ಬಗ್ಗೆ ಕೋರ್ಟ್ ಗೆ ನೋವಿದೆ ಎಂದು ಕೂಡ ಪೀಠ ತಿಳಿಸಿದೆ.
ಆನುವಂಶಿಕ ಖಾಯಿಲೆಯಾದ ಡೌನ್ ಸಿಂಡ್ರೋಮ್ ನಿಂದ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯದ ನ್ಯೂನ್ಯತೆ ಮತ್ತು ದೈಹಿಕ ಊನಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಮೆಡಿಕಲ್ ಟರ್ಮಿನೇಷನ್ ಆಫ್ ಪ್ರಗ್ನೆನ್ಸಿ (ಎಂಟಿಪಿ) ನೀತಿ ೧೯೭೧ ರ ಪ್ರಕಾರ ಸಾಮಾನ್ಯ ಗರ್ಭವನ್ನು ೧೨ ವಾರದೊಳಗೆ ತೆಗೆಸಿಕೊಳ್ಳಬಹುದು.
ಗರ್ಭಿಣಿಯ ಜೀವಕ್ಕೆ ಧಕ್ಕೆ ಇರುವುದಾಗಿ ತಿಳಿದುಬಂದರೆ ಇಬ್ಬರು ವೈದ್ಯರ ಅನುಮೋದನೆಯಿಂದ ೧೨-೨೦ ವಾರಗಳ ಗರ್ಭವನ್ನು ತೆಗೆದುಹಾಕಲು ಅವಕಾಶವಿದೆ.
ಹುಟ್ಟಿದ ನಂತರ ಮಗುವಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ನ್ಯೂನ್ಯತೆ ಇರುವುದಾದರೆ ಅಥವಾ ಗರ್ಭಿಣಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆಯಾಗುವುದಾದರೆ ಇಂತಹ ತೀವ್ರ ಪ್ರಕರಣಗಳಲ್ಲಿ ವಿಶೇಷ ರಿಯಾಯಿತಿ ನೀಡುವುದು ಉಚಿತ ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಡೌನ್ ಸಿಂಡ್ರೋಮ್ ಅನ್ನು ಸರಿಪಡಿಸಲು ಸಾಧ್ಯವಿಲ್ಲ ಮತ್ತು ಹುಟ್ಟುವ ಮಗು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತರಲು ಅರ್ಜಿಯಲ್ಲಿ ಮಹಿಳೆ ಪ್ರಯತ್ನಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos