ನವದೆಹಲಿ: ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವಿನಿಂದ ಕಂಗೆಟ್ಟಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಮುಂಬರುವ ದೆಹಲಿ ಮಹಾನಗರ ಪಾಲಿಕೆಗೆಳ ಚುನಾವಣೆಯಲ್ಲಿ ಇವಿಎಂ ವಿಧಾನದ ಬದಲು ಮತಪತ್ರ ವಿಧಾನವನ್ನೇ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಎವಿಎಂ ಮೆಷಿನ್ಗಳಲ್ಲಿ ದೋಷವಿದೆ ಎಂದು ಆರೋಪಿಸಿದ್ದರು. ಅಲ್ಲದೆ ಮರು ಚುನಾವಣೆ ನಡೆಸಿ ಮತಪತ್ರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಈಗ ದೆಹಲಿ ಸಿಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮತ್ತೊಂದು ಕಡೆ ಮೋದಿ ಸುನಾಮಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಸಹ ಇವಿಎಂ ಬದಲು ಬ್ಯಾಲೆಟ್ ಪೇಪರ್ಗಳನ್ನು ಬಳಕೆ ಮಾಡುವಂತೆ ಒತ್ತಾಯ ಹೇರಬೇಕು ಎಂದು ಕೇಜ್ರಿವಾಲ್ಗೆ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಾಖೆನ್ ಅವರು ಪತ್ರ ಬರೆದಿದ್ದಾರೆ.
ಇಸಿ ಮುಖಸ್ಥ ಎಂಎಂ ಕುಟ್ಟಿ ಅವರಿಗೆ ಮುಂಬರುವ ದೆಹಲಿ ಪೌರಸಂಸ್ಥೆಗಳ ಚುನಾವಣೆಗೆಯನ್ನು ಮತಪತ್ರ ವಿಧಾನದ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಕೇಜ್ರಿವಾಲ್ ಸಲಹೆ ನೀಡಿದ್ದು, ಅರವಿಂದ ಕೇಜ್ರಿವಾಲ್ ಹಳೆಯ ಪದ್ಧತಿಯಾದ ಮತಪತ್ರ ವಿಧಾನಕ್ಕೆ ಒತ್ತಾಯ ಪಡಿಸಿರುವುದು ಮತದಾನದ ವಿಧಾನದ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ.