ಲಖನೌ: ಅವರ ತಂದೆಗಾಗಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣ ಯಾದವ್ ಹೇಳಿದ್ದಾರೆ.
ಮುಲಾಯಂ ಸಿಂಗ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣ, ಅಂತರ್ಜಾಲ ಸುದ್ದಿ ತಾಣವೊಂದಕ್ಕೆ ಈ ಹೇಳಿಕೆ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಶಿವಪಾಲ್ ಯಾದವ್ ಬೆಂಬಲಿಗರಾದ ದೀಪಕ್ ಮಿಶ್ರ ಮತ್ತಿತರನ್ನು ಅಖಿಲೇಶ್ ಪಕ್ಷದಿಂದ್ ಉಚ್ಛಾಟಿಸಿದ ಬೆನ್ನಲ್ಲೇ ಅಪರ್ಣ ಈ ಹೇಳಿಕೆ ನೀಡಿದ್ದಾರೆ.
ಭಾನುವಾರ ಮೈನ್ಪುರಿಯಲ್ಲಿ ಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ್ದ ಮುಲಾಯಂ ಸಿಂಗ್, ತಮ್ಮ ಪುತ್ರ ಅಖಿಲೇಶ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದು ತಮ್ಮ ಅತಿ ದೊಡ್ಡ ತಪ್ಪು ಎಂದು ಕೂಡ ಹೇಳಿದ್ದರು.
ಈಗ ಸಮಾಜವಾದಿ ಪಕ್ಷ ಇಬ್ಭಾಗವಾಗುದು ಖಚಿತ ಎನ್ನುತ್ತಿರುವ ಮೂಲಗಳು ಯಾವುದಾದರೂ ಒಂದು ಬಣ ಕಣ್ಣು ಮಿಟುಕಿಸುವುದಕ್ಕಾಗಿ ಕಾಯಲಾಗುತ್ತಿದೆ ಎನ್ನುತ್ತವೆ.
ಫೆಬ್ರವರಿ-ಮಾರ್ಚ್ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ದಯನೀಯವಾಗಿ ಸೋಲು ಕಂಡ ನಂತರ ಮುಲಾಯಂ ಅವರ ಸಹೋದರ ಶಿವಪಾಲ್ ಸಾರ್ವಜನಿಕವಾಗಿಯೇ ಅಖಿಲೇಶ್ ಅವರನ್ನು ಟೀಕಿಸುತ್ತಾ ಬಂದಿದ್ದಾರೆ.