ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಆಲಿಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೇ ೩೦ ರಂದು ತನ್ನೆದುರು ಹಾಜರಾಗುವಂತೆ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಉಮಾ ಭಾರತಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ಸಮನ್ಸ್ ನೀಡಿದೆ. ಇದಕ್ಕೂ ಮುಂಚಿತವಾಗಿ ಸುಪ್ರೀಂ ಕೋರ್ಟ್ ಈ ಮುಖಂಡರ ವಿರುದ್ಧ ಕ್ರಿಮಿನಲ್ ಪಿತೂರಿಯ ಆರೋಪವನ್ನು ಹೊರಿಸಿತ್ತು. ಕೋರ್ಟ್ ಮುಂದೆ ಹಾಜರಾದ ನಂತರ ಈ ಮುಖಂಡರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸಿಬಿಐ ವಕೀಲ ಲಲಿತ್ ಸಿಂಗ್ ಹೇಳಿದ್ದಾರೆ.
ಡಿಸೆಂಬರ್ ೬, ೧೯೯೨ ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ನಂತರ ಎರಡು ಎಫ್ ಐ ಆರ್ ಗಳನ್ನು ದಾಖಲಿಸಲಾಗಿತ್ತು. ೨೮ ಜನರ ವಿರುದ್ಧ ಆರೋಪಿವಿದ್ದ ಈ ಪ್ರಕರಣ ಲಖನೌ ಸಿಬಿಐ ಕೋರ್ಟ್ ನಲ್ಲಿ ಜರುಗುತ್ತಿತ್ತು,. ಈ ಪ್ರಕರಣದ ಇನ್ನಿತರ ಆರು ಆರೋಪಿಗಳು ಮೃತಪಟ್ಟಿದ್ದಾರೆ. ರಾಯ್ಬರೇಲಿ ಕೋರ್ಟ್ ನಲ್ಲಿ ಅಡ್ವಾಣಿ ಮತ್ತು ಇನ್ನಿತರ ಏಳು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ವಿಚಾರಣೆ ಮುಗಿಯುವುದಕ್ಕೆ ಮುಂಚಿತವಾಗಿಯೇ ಇವರಲ್ಲಿ ಇಬ್ಬರು ಆರೋಪಿಗಳಾದ ವಿ ಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಮೃತಪಟ್ಟಿದ್ದರು.
ಏಪ್ರಿಲ್ ೧೯ ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಅಡ್ವಾಣಿ, ಭಾರತಿ ಮತ್ತು ಜೋಶಿ ಅವರ ವಿರುದ್ಧವೂ ಕ್ರಿಮಿನಲ್ ಪಿತೂರಿ ಅಪರಾಧ ಹೊರಿಸಿ, ಅವರ ಪ್ರಕರಣವನ್ನು ರಾಯ್ಬರೇಲಿ ಕೋರ್ಟ್ ನಿಂದ ಲಖನೌ ಸಿಬಿಐ ಕೋರ್ಟ್ ಗೆ ವರ್ಗಾವಣೆ ಮಾಡಿತ್ತು.
ಈ ಪ್ರಕರಣದಲ್ಲಿ ವ್ಯಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ಕೋರಿ ಈ ಬಿಜೆಪಿ ಮುಖಂಡರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.