1999ರ ಕಾರ್ಗಿಲ್ ಕದನದ ಸಂದರ್ಭದಲ್ಲಿ ಇಸ್ರೇಲ್ ದೇಶದ ನೆರವನ್ನು ಭಾರತ ಮರೆಯಲು ಸಾಧ್ಯವೇ ಇಲ್ಲ...ಯುದ್ಧದ ಸಂದರ್ಭದಲ್ಲಿ ಭಾರತದ ಶಸ್ತ್ರಾಸ್ತ್ರ ದಾಸ್ತಾನು ಖಾಲಿಯಾಗುವ ಭೀತಿ ಎದುರಾಗುತ್ತಿದ್ದಂತೆಯೇ ಇಸ್ರೇಲ್ ನೆರವಿನ ಹಸ್ತ ಚಾಚಿತ್ತು.
ನಿಜ ಹೇಳುಬೇಕು ಎಂದರೆ ಭಾರತಕ್ಕೆ ನೆರವು ನೀಡಲೇಬೇಕು ಎಂಬ ಒತ್ತಾಯ ಇಸ್ರೇಲ್ ಮೇಲಿರಲಿಲ್ಲ. ಮತ್ತೊಂದು ಅಂಶವೆಂದರೆ ಅಂದಿನ ಕಾಲಕ್ಕೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಎಂದೆನಿಸಿಕೊಂಡಿದ್ದ ಎರಡು ದೇಶಗಳು (ಅಮೆರಿಕ ಸೇರಿದಂತೆ) ಭಾರತಕ್ಕೆ ನೆರವು ನೀಡದಂತೆ ಮತ್ತು ಕಾದುನೋಡುವ ತಂತ್ರ ಅನುಸರಿಸುವಂತೆ ಇಸ್ರೇಲ್ ಗೆ ಸಲಹೆ ನೀಡಿದ್ದವಂತೆ. ಆದರೆ ಆ ಬಲಾಢ್ಯ ರಾಷ್ಟ್ರಗಳ ಮಾತಿನ ಹೊರತಾಗಿಯೂ ಇಸ್ರೇಲ್ ಭಾರತಕ್ಕೆ ನೇರವಾಗಿಯೇ ಸಹಾಯ ಹಸ್ತ ಚಾಚಿತ್ತು. ಇಸ್ರೇಲ್ ನ ಈ ನಡೆ ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತಾದರೂ, ಇಸ್ರೇಲ್ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿಯಲೇ ಇಲ್ಲ.
ಪ್ರಮುಖಾಂಶವೆಂದರೆ ಇಸ್ರೇಲ್ ರಚನೆ ಸಂದರ್ಭದಲ್ಲಿ ಭಾರತ ಇಸ್ರೇಲ್ ಅನ್ನು ಪ್ರತ್ಯೇಕ ದೇಶವಾಗಿ ರಚಸಿವುದು ಬೇಡ ಎನ್ನುವುದರ ಪರ ಮತ ಹಾಕಿತ್ತು. ಇದಾವುದನ್ನು ಮನಸ್ಸಿಗೆ ಹಾಕಿಕೊಳ್ಳದೇ ಇಸ್ರೇಲ್ ಭಾರತದ ಸಂಕಷ್ಟಕ್ಕೆ ಸ್ಪಂದಿಸಿತ್ತು. ಇತ್ತ ದೆಹಲಿ-ಇಸ್ಲಾಮಾಬಾದ್ ನಡುವೆ ಸಂಧಾನ ಮತ್ತು ಚರ್ಚೆಗಳು ನಡೆಯುತ್ತಿರುವಂತೆಯೇ ಅತ್ತ ಕಾರ್ಗಿಲ್ ನಲ್ಲಿ ಯುದ್ದ ಮಾಡುತ್ತಿದ್ದ ಸೈನಿಕರ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳು ಕೂಡ ಖಾಲಿಯಾಗ ತೊಡಗಿತ್ತು. ಇದೇ ಸಂದರ್ಭದಲ್ಲಿ ಭಾರತಕ್ಕೆ ಬರಬೇಕಿದ್ದ ಶಸ್ತ್ರಾಸ್ತ್ರ ಪೂರೈಕೆಯನ್ನು ಅಮೆರಿಕ ಉದ್ದೇಶಪೂರ್ವಕವಾಗಿಯೇ ತಡ ಮಾಡಿತ್ತು. ಇದರ ಹಿಂದಿನ ಕಾರಣವೇನು ತಿಳಿದಿಲ್ಲವಾದರೂ, ತಜ್ಞರ ಪ್ರಕಾರ ತನ್ನ ಶಸ್ತ್ರಾಸ್ತ್ರಗಳು ಹೆಚ್ಚೆಚ್ಚು ಮಾರಾಟಕ್ಕೆ ಹವಣಿಸಿದ್ದ ಅಮೆರಿಕ ಲಾಭಕ್ಕಾಗಿ ಈ ಅಡ್ಡದಾರಿ ತುಳಿದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
ಆದರೆ ಒಂದರ್ಥದಲ್ಲಿ ಅಮೆರಿಕದ ಆ ನಿಲುವು ಅದಕ್ಕೇ ಮಾರಕವಾಯಿತು ಎಂದು ಹೇಳಬಹುದು. ಅಂದು ಅಮೆರಿಕ ಕೈ ಕೊಟ್ಟಿದ್ದರಿಂದಲೇ ಇಸ್ರೇಲ್ ಭಾರತದ ನೆರವಿಗೆ ನಿಂತು ಅಪಾರ ಪ್ರಮಾಣದ ಮಾರ್ಟರ್ ಶೆಲ್ ಗಳು ಹಾಗೂ ಮದ್ದುಗುಂಡುಗಳನ್ನು ಭೇಷರತ್ ಆಗಿ ಪೂರೈಕೆ ಮಾಡಿತ್ತು. ಕೇವಲ ಅಷ್ಟು ಮಾತ್ರವಲ್ಲದೇ ಅಮೆರಿಕ ಮತ್ತು ವಿಶ್ವದ ಇತರೆ ರಾಷ್ಟ್ರಗಳ ಒತ್ತಾಯವನ್ನೂ ಪಕ್ಕಕ್ಕಿಟ್ಟು ಭಾರತಕ್ಕೆ ರವಾನೆ ಮಾಡುತ್ತಿದ್ದ ಶಸ್ತ್ರಾಸ್ತ್ರಗಳ ಪೂರೈಕೆಗೂ ವೇಗ ನೀಡಿತು. ಇಷ್ಟೇ ಅಲ್ಲದೆ ವಿಚಕ್ಷಣ ಡ್ರೋನ್ ಗಳು ಮತ್ತು ತುಂಬಾ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡಿ ದಾಳಿ ಮಾಡುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಭಾರತಕ್ಕೆ ಪೂರೈಕೆ ಮಾಡಿತ್ತು. ಇದರ ಪರಿಣಾಮವಾಗಿಯೇ 15000 ಅಡಿ ಎತ್ತರದ ಪ್ರದೇಶಗಳಲ್ಲಿ ಅಡಗಿ ಕುಳಿತು ದಾಳಿ ಮಾಡುತ್ತಿದ್ದ ಪಾಕ್ ಸೈನಿಕರನ್ನು ಭಾರತದ ಸೈನಿಕರು ನಾಶ ಮಾಡಿದ್ದರು.
ಭಾರತದ ಬಳಿ ಇದ್ದ ಯುದ್ಧ ವಿಮಾನಗಳಿಗೆ ಅಷ್ಟು ಎತ್ತರದಲ್ಲಿ ಹಾರಾಟ ಮಾಡಿ ದಾಳಿ ಮಾಡುವ ಸಾಮರ್ಥ್ಯ ಇರಲಿಲ್ಲ. ಭಾರತದ ಬಳಿ ಇದ್ದ ಎಂಐ35 ಹೆಲಿಕಾಪ್ಟರ್ ನ ಸಾಮರ್ಥ್ಯ 8 ರಿಂದ 10 ಸಾವಿರ ಮೀಟರ್ ಎತ್ತರವಾಗಿತ್ತು. ಇಸ್ರೇಲ್ ನಿಂದ ಮಿರಾಜ್ 2000ಹೆಚ್ ಹೆಲಿಕಾಪ್ಟರ್, ಲೇಸರ್ ಗೈಡೆಡ್ ಕ್ಷಿಪಣಿಗಳನ್ನು ಬಳಕೆ ಮಾಡಿಕೊಂಡು ಪಾಕ್ ಸೈನಿಕರ ಹುಟ್ಟಡಗಿಸಲಾಗಿತ್ತು. ಇಸ್ರೇಲ್ ನೀಡಿದ್ದ ಕಣ್ಗಾವಲು ಡ್ರೋನ್ ಹೆರಾನ್ ನಿಂದಾಗಿ ಭಾರತಕ್ಕೆ ಅತ್ಯುತ್ತಮ ಯೋಜನೆ ರೂಪಿಸಲು ನೆರವಾಗಿತ್ತು, ಲೇಸರ್ ಆಧರಿತ ಕ್ಷಿಪಣಿಗಳಿಂದಾಗಿ ಎತ್ತರ ಪ್ರದೇಶದಲ್ಲಿದ್ದ ಪಾಕ್ ಸೈನಿಕನ್ನು ಚಿಂದಿ ಉಡಾಯಿಸಲಾಗಿತ್ತು. ಪಾಕ್ ಸೈನಿಕರು ಅಡಗಿಕೊಂಡಿದ್ದ ಪ್ರದೇಶಗಳನ್ನು ಗುರುತಿಸಲು ಪ್ರತಿದಾಳಿ ಯೋಜನೆ ರೂಪಿಸಲು ಇಸ್ರೇಲ್ ಕಣ್ಗಾವಲು ಡ್ರೋನ್ ಗಳು ನೆರವಾಗಿತ್ತು. ಹೀಗಾಗಿ ಭಾರತ ಕಾರ್ಗಿಲ್ ಯುದ್ಧವನ್ನು ಜಯಿಸಿತ್ತು.
ಯುದ್ಧದ ಬಳಿಕವೂ ಮುಂದುವರೆದ ಭಾರತ ಇಸ್ರೇಲ್ ಸ್ನೇಹ ಸಂಬಂಧ ಕಾರ್ಗಿಲ್ ಯುದ್ಧ ಬಳಿಕ ಅಂದರೆ 2000ದಲ್ಲಿ ಗೃಹ ಸಚಿವ ಎಲ್.ಕೆ. ಅಡ್ವಾಣಿ ಮತ್ತು ಹಣಕಾಸು ಸಚಿವ ಜಸ್ವಂತ್ ಸಿಂಗ್ ಅವರು ಇಸ್ರೇಲ್ಗೆ ಭೇಟಿ ನೀಡಿದ್ದರು.. ರಕ್ಷಣಾ ವ್ಯವಸ್ಥೆ ಆಧುನೀಕರಣಕ್ಕೆ ನೆರವು ಕೋರುವುದು ಭೇಟಿಯ ಉದ್ದೇಶವಾಗಿತ್ತು. ಇಷ್ಚು ಮಾತ್ರವಲ್ಲ ಯುದ್ಧಕ್ಕೂ ಮೊದಲೇ ಅಂದರೆ 1998ರಲ್ಲಿ ಭಾರತ ಎರಡನೇ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಪರಿಣಾಮವಾಗಿ ಅಮೆರಿಕ ಮತ್ತು ಪಶ್ಚಿಮದ ಇತರ ದೇಶಗಳು ಭಾರತದ ಮೇಲೆ ನಿರ್ಬಂಧ ಹೇರಿದವು. ಆದರೆ ಇಸ್ರೇಲ್ ನಿರ್ಬಂಧ ಹೇರಲಿಲ್ಲ. ಅಷ್ಟು ಮಾತ್ರವಲ್ಲ, ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸಿತು. ಹಾಗಾಗಿ ನಿರ್ಬಂಧ ಭಾರತದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿಲ್ಲ.