ವಿದೇಶ

ಬುಡಾಪೆಸ್ಟ್ ರೈಲು ಏರಲು ಮುತ್ತಿದ ನಿರಾಶ್ರಿತರು; ಎರಡನೆ ವಿಶ್ವಯುದ್ಧ ನಂತರದ ಅತಿ ದೊಡ್ಡ ವಲಸೆ ಬಿಕ್ಕಟ್ಟು

Guruprasad Narayana

ಬುಡಾಪೆಸ್ಟ್: ಸಿರಿಯನ್ ನಿರಾಶ್ರಿತ ಬಾಲಕನ ದೇಹ ಟರ್ಕಿ ಬೀಚಿನಲ್ಲಿ ತೇಲುತ್ತಿದ್ದ ಫೋಟೋ ಮಾತು ಸಂಗತಿ ಯೂರೋಪಿಯನ್ ನಿವಾಸಿಗಳ ಹೃದಯವನ್ನು ಕಲಕಿದೆ. ಈಗ ಸಾವಿರಾರು ನಿರಾಶ್ರಿತ ವಲಸಿಗರು ಬುಡಾಪೆಸ್ಟ್ ಕೇಂದ್ರ ಅಂತರಾಷ್ಟ್ರೀಯ ರೈಲು ನಿಲ್ದಾಣದಲ್ಲಿ ಗುರುವಾರ ನೆರೆದಿದ್ದಾರೆ. ಇಂದೆ ಪೊಲೀಸರು ರೈಲು ನಿಲ್ದಾಣವನ್ನು ಮತ್ತೆ ತೆರೆದಿದ್ದಾರೆ.

ನಿಲ್ದಾಣದಲ್ಲಿ ನಿಂತಿದ್ದ ರೈಲು ಏರಲು ಜನ ಏಕಕಾಲಕ್ಕೆ ಮುನ್ನುಗ್ಗುತ್ತಿದು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ವಲಸಿಗರು ಜರ್ಮನಿ ಮತ್ತು ಆಸ್ಟ್ರಿಯಾದೆಡೆಗೆ ಹೋಗಲು ಹವಣಿಸುತ್ತಿದ್ದು, ಆ ದೇಶಗಳು ವಲಸಿಗರನ್ನು ನಿಯಂತ್ರಿಸಲು ರೈಲುಗಳನ್ನು ನಿರ್ಬಂಧಿಸಿರುವುದಾಗಿ ತಿಳಿದುಬಂದಿದೆ.

ಎರಡನೇ ವಿಶ್ವಯುದ್ಧದ ನಂತರ ತಲೆದೋರಿರುವ ಅತಿ ದೊಡ್ಡ ವಸಲಿಗರ ಬಿಕ್ಕಟ್ಟನ್ನು ಬಗೆಹರಿಸಲು ಬ್ರಸ್ಸಲ್ಸ್ ನಲ್ಲಿ ಸಭೆ ನಡೆಸಲು ಯೂರೋಪಿಯನ್ ಯೂನಿಯನ್ ಗೆ ಹಂಗೆರಿಯ ಪ್ರಧಾನಿ ವಿಕ್ಟರ್ ಆರ್ಬಾನ್ ಕರೆ ಕೊಟ್ಟಿದ್ದಾರೆ. ಈ ವಲಸಿಗರ ಬಿಕ್ಕಟ್ಟಿನ ಬಗ್ಗೆ ಯೂರೋಪಿಯನ್ ದೇಶಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

"ಪೂರ್ವ ಮತ್ತು ಪಶ್ಚಿಮ ಯೂರೋಪಿಯನ್ ಯೂನಿಯನ್ ನಡುವೆ ಭಿನ್ನಾಭಿಪ್ರಾಯಗಳಿವೆ" ಎಂದು ಯೂರೋಪಿಯನ್ ಯುನಿಯನ್ ಅಧ್ಯಕ್ಷ ಡೊನಾಲ್ಡ್ ಹಸ್ಕ್ ತಿಳಿಸಿದ್ದಾರೆ.

ಕೆಲವು ದೇಶಗಳು ವಲಸಿಗರನ್ನು ತಡೆಯಬೇಕು ಎಂದಿದ್ದರೆ, ಇನ್ನೂ ಹಲವು ದೇಶಗಳು ಮಾನವೀಯತೆಯ ಆಧಾರದ ಮೇಲೆ ವಲಸಿಗರಿಗೆ ಎಲ್ಲ ದೇಶಗಳಲ್ಲೂ ಸಮನಾಗಿ ಆಶ್ರಯ ಒದಗಿಸಬೇಕು ಎಂದು ಕರೆ ಕೊಟ್ಟಿವೆ.

ಈಗ ಸಾಮಾನ್ಯವಾಗಿ ಸಿರಿಯನ್ ಸೇರಿದಂತೆ ಹಲವು ದೇಶಗಳಿಂದ ನಿರಾಶ್ರಿತರು ಸಾಗರ ಅಥವಾ ಭೂಮಾರ್ಗದ ಮೂಲಕ ಗ್ರೀಸ್, ಇಟಲಿ ಮತ್ತು ಹಂಗೆರಿಗೆ ಬಂದಿಳಿಯುತ್ತಿದ್ದಾರೆ ಹಾಗು ಉತ್ತರ ಮತ್ತು ಪಶ್ಚಿಮ ಯೂರೋಪಿಯನ್ ದೇಶಗಳಲ್ಲಿ ರಾಜಕೀಯ ಆಶ್ರಯ ಪಡೆಯುವ ಭರವಸೆ ಹೊಂದಿದ್ದಾರೆ.

ಯೂರೋಪಿಯನ್ ಯೂನಿಯನ್ ದೇಶಗಳ ನಡುವೆ ಈ ಭಾರಿ ಸಂಖ್ಯೆಯ ವಲಸಿಗರನ್ನು ಹಂಚಿ ಆಶ್ರಯ ನೀಡಲು ಸೂಕ್ತ ಮಾರ್ಗ ಕಂಡುಹಿಡಿಯುವಂತೆ ಫ್ರಾನ್ಸ್, ಇಟಲಿ ಮತ್ತು ಜರ್ಮನಿ ದೇಶಗಳು ಕರೆ ನೀಡಿವೆ.

ಆಗಸ್ಟ್ ನಲ್ಲಿಯೇ ಸುಮಾರು ೫೦,೦೦೦ ನಿರಾಶ್ರಿತರು ಹಂಗೆರಿ ದೇಶಕ್ಕೆ ಬಂದಿಳಿದಿದ್ದಾರೆ.

SCROLL FOR NEXT