ವಿದೇಶ

ಮುಂದುವರೆದ ನೇಪಾಳ ಬಿಕ್ಕಟ್ಟು: ಇಂಧನ ಕೊರತೆಯಿಂದಾಗಿ 2 ದಿನಕ್ಕೊಮ್ಮೆ ವಾಹನ ಸಂಚಾರ!

Srinivasamurthy VN

ಕಠ್ಮಂಡು: ನೇಪಾಳದಲ್ಲಿ ಹೊಸಸಂವಿಧಾನ ಘೋಷಣೆಯಾಗುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಪ್ರತಿಭಟನೆ ತಾರಕಕ್ಕೇರಿದ್ದು, ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.

ಮೂಲಗಳ ಪ್ರಕಾರ ನೇಪಾಳದಲ್ಲಿ ಹೊಸ ಸಂವಿಧಾನ ಘೋಷಣೆಯಾಗುತ್ತಿದ್ದಂತೆಯೇ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಹಿಂದೂ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು  ತೀವ್ರಗೊಳಿಸಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವಾಗಿದ್ದು, ನೇಪಾಳಕ್ಕೆ ಇದೀಗ ಇಂಧನ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಖಾಸಗಿ  ಮತ್ತು ಸರ್ಕಾರಿ ವಾಹನಗಳ ಬಳಕೆಗೆ ನೇಪಾಳ ಸರ್ಕಾರ ನಿಯಂತ್ರಣ ಹೇರಿದೆ.

ನಿಯಂತ್ರಣ ನಿಯಮದ ಅನ್ವಯ ವಾಹನಗಳ ನಂಬರ್ ಪ್ಲೇಟ್‌ನಲ್ಲಿನ ಕೊನೆಯ ಸಂಖ್ಯೆಯ ಆಧಾರದಲ್ಲಿ ಆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.  ಅಂದರೆ ವಾಹನವೊಂದರ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ ಸಮ ಸಂಖ್ಯೆಯಾಗಿದ್ದರೆ (ಉದಾ: 0,2,4,6,8) ಸಮಸಂಖ್ಯೆಯ ದಿನಾಂಕದಂದು ಮಾತ್ರ ಆ ವಾಹನಗಳು  ಓಡಾಡಬೇಕು. ಬೆಸಸಂಖ್ಯೆ ಇದ್ದಲ್ಲಿ (1,3,5,7,9) ಬೆಸ ಸಂಖ್ಯೆಯ ದಿನಾಂಕಗಳಂದು ಮಾತ್ರ ಆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.  ಇದೇ ವೇಳೆ ಅಂತಾರಾಷ್ಟ್ರೀಯ ವಿಮಾನಗಳು, ವಿದೇಶದಲ್ಲೇ ಇಂಧನ ತುಂಬಿಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಇಂಧನ ಕೊರತೆಗೆ ಭಾರತ ಕಾರಣ ಎಂದ ನೇಪಾಳಿ ಪತ್ರಿಕೆಗಳು
ಇದೇ ವೇಳೆ ನೇಪಾಳದಲ್ಲಿ ತಲೆದೋರಿರುವ ಇಂಧನ ಮತ್ತು ಅಗತ್ಯ ವಸ್ತುಗಳ ಕೊರತೆಗೆ ಭಾರತ ಸರ್ಕಾರವೇ ನೇರಕಾರಣ ಎಂದು ಆರೋಪಿಸಿ ನೇಪಾಳಿ ಪತ್ರಿಕೆಗಳು ವರದಿ  ಪ್ರಕಟಿಸಿವೆ. ಗಡಿಯಲ್ಲಿ ಭಾರತದ ಸುಂಕ ಅಧಿಕಾರಿಗಳು ಅಗತ್ಯ ವಸ್ತುಗಳ ಸಾಗಾಟಕ್ಕೆ ಅಡ್ಡಿಮಾಡಿ, ನೇಪಾಳಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಅವು ಕಿಡಿಕಾರಿವೆ. ಇನ್ನು ಕೆಲವು  ಪತ್ರಿಕೆಗಳು, ಭಾರತ ನಮ್ಮ ಆಂತರಿಕ ವಿಷಯದಲ್ಲಿ ತಲೆಹಾಕುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿವೆ.

ನೇಪಾಳ ಸರಕಾರ ಇತ್ತೀಚೆಗೆ ಅಂಗೀಕರಿಸಿದ ಸಂವಿಧಾನದಲ್ಲಿನ ಕೆಲ ಅಂಶಗಳ ಬಗ್ಗೆ ಮಧೇಸಿ ಹಿಂದೂ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಅದು ಭಾರತಕ್ಕೆ  ಹೊಂದಿಕೊಂಡಿರುವ ನೇಪಾಳ ಗಡಿ ಸೇರಿದಂತೆ ಹಲವು ಕಡೆ ಭಾರೀ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆ ವೇಳೆ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ  ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡುವ ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ತನ್ನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

SCROLL FOR NEXT