ವಿದೇಶ

ಭಾರತದಲ್ಲಿರುವ ನೇಪಾಳ ರಾಯಭಾರಿ ವಾಪಸ್ ಕರೆಸಿಕೊಂಡ ನೇಪಾಳ!

Srinivasamurthy VN

ಕಠ್ಮಂಡು: ಭಾರತದಲ್ಲಿರುವ ನೇಪಾಳದ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ಅವರನ್ನು ನೇಪಾಳ ಸರ್ಕಾರ ವಾಪಸ್ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ.

ನೇಪಾಳ ಸರ್ಕಾರದೊಂದಿಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಭಾರದಲ್ಲಿ ನೇಪಾಳ ದೇಶದ ರಾಯಭಾರಿಯಾಗಿದ್ದ ದೀಪ್ ಕುಮಾರ್ ಉಪಾಧ್ಯಾಯ ಅವರನ್ನು ನೇಪಾಳ ಸರ್ಕಾರ ವಾಪಸ್  ಕರೆಸಿಕೊಂಡಿದ್ದು, ಆವರ ಸ್ಥಾನಕ್ಕೆ ಬೇರೊಬ್ಬ ರಾಯಭಾರಿಯನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ನೇಪಾಳ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.

ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಬಿಂದ್ಯಾ ಬಂಡಾರಿ ಅವರ ಭಾರತ ಭೇಟಿಯನ್ನು ಮುಂದೂಡಲು  ದೀಪ್ ಕುಮಾರ್ ಉಪಾಧ್ಯಾಯ ಅವರು ವಿರೋಧ  ವ್ಯಕ್ತಪಡಿಸಿದ್ದರು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನೇಮಕವಾಗಿದ್ದ  ದೀಪ್ ಕುಮಾರ್ ಉಪಾಧ್ಯಾ ಅವರು ನೇಪಾಳದ ಕೆ.ಪಿ. ಒಲಿ ನೇತೃತ್ವದ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸಿರುವ  ಆರೋಪ ಎದುರಿಸುತ್ತಿದ್ದರು. ಅದಲ್ಲದೇ ಅನುಮತಿ ಇಲ್ಲದೇ ಮಧೇಸಿ ಹೋರಾಟಗಾರರ ಜತೆ ಮಾತುಕತೆ ನಡೆಸಿದ್ದರಿಂದ ಅವರ ವಿರುದ್ಧ ಅಸಾಮಾಧಾನಗೊಂಡಿದ್ದ ನೇಪಾಳ ಸರ್ಕಾರ ಇದೀಗ  ಅವರನ್ನು ಎತ್ತಂಗಡಿ ಮಾಡಿದೆ.

ಎತ್ತಂಗಡಿಗೆ ಕಾರಣವಾಯ್ತೆ ರಾಜಕೀಯ?
ಇನ್ನು ದೀಪ್ ಕುಮಾರ್ ಉಪಾಧ್ಯಾಯ ಅವರ ಎತ್ತಂಗಡಿದೆ ನೇಪಾಳ ರಾಜಕೀಯ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ದೀಪ್ ಕುಮಾರ್ ಉಪಾಧ್ಯಾಯ ನೇಪಾಳ ಕಾಂಗ್ರೆಸ್ ನ ಪ್ರಮುಖ  ಮುಖಂಡರಾಗಿದ್ದಾರೆ. ಪ್ರಸ್ತುತ ನೇಪಾಳ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದು, ಇದೇ ಕಾರಣಕ್ಕಾಗಿ ಅವರನ್ನು ಎತ್ತಂಗಡಿ ಮಾಡಲಾಗಿದೆಯೇ ಎಂಬ ಅನುಮಾನ ಕೂಡ ಕಾಡತೊಡಗಿದೆ.

ನೇಪಾಳದಲ್ಲಿ ರಾಜಕೀಯ ಅಸ್ಥಿರತೆ; ನೇಪಾಳ ಅಧ್ಯಕ್ಷರ ಭಾರತ ಭೇಟಿ ರದ್ದು
ನೇಪಾಳ ದೇಶದಲ್ಲಿ ಎದ್ದಿರುವ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಂದ್ಯಾ ದೇವಿ ಭಂಡಾರಿ ಅವರ ಭಾರತ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಇದೇ ಮೇ 9ರಂದು ಭಾರತಕ್ಕೆ  ಆಗಮಿಸಲಿದ್ದ ಬಿಂದ್ಯಾ ದೇವಿ ಭಂಡಾರಿ ಅವರು ಮೇ 14ರಂದು ಉಜ್ಜೈನಿಯ ಸಿಂಹಸ್ಥ ಕುಂಭದಲ್ಲಿ ಶಾಹಿ ಸ್ನಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಪ್ರವಾಸ ರದ್ದಾಗಿರುವುದರಿಂದ  ಅವರ ಈ ಕಾರ್ಯಕ್ರಮ ಕೂಡ ರದ್ದಾಗಿದೆ.

ಇನ್ನು ನೇಪಾಳದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೆರವು ನೀಡಲು ಮುಂದೆ ಬಂದಿದ್ದ ಭಾರತದ ಸಹಾಯವನ್ನು ನೇಪಾಳ ತಿರಸ್ಕರಿಸಿದೆ. ತಿರಸ್ಕಾರದ ಹಿಂದಿನ  ಕಾರಣವನ್ನು ನೇಪಾಳ ಸರ್ಕಾರ ತಿಳಿಸಿಲ್ಲವಾದರೂ, ಈ ಹಿಂದೆ ನೇಪಾಳದಲ್ಲಿ ಮಧೇಸಿ ಸಮುದಾಯ ನಡೆಸಿದ್ದ ಭಾರಿ ಪ್ರತಿಭಟನೆ ವೇಳೆ ಭಾರತದ ನಡೆ ನೇಪಾಳ ಸರ್ಕಾರಕ್ಕೆ ಅಸಮಾಧಾನ  ಉಂಟುಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT