ವಿದೇಶ

ಸಿಪಿಇಸಿಗೆ ಕಾಶ್ಮೀರ ವಿವಾದ ಹಾನಿಯಾಗಲಿದೆ, ಆದರೂ ಭಾರತವನ್ನು ಓಲೈಸಬೇಕಿಲ್ಲ: ಚೀನಾ ಮಾಧ್ಯಮ

Srinivas Rao BV
ಬೀಜಿಂಗ್: ಕಾಶ್ಮೀರ ವಿವಾದ ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಡಚಣೆಯಾಗಲಿದೆ ಎಂದು ಇದೇ ಮೊದಲ ಬಾರಿಗೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮವೊಂದು ಒಪ್ಪಿಕೊಂಡಿದೆ. 
ಸಿಪಿಇಸಿ ಬಗ್ಗೆ ಲೇಖನ ಪ್ರಕಟಿಸಿರುವ ಚೀನಾ ಮಾಧ್ಯಮ, ಇದೇ ಮೊದಲ ಬಾರಿಗೆ ಕಾಶ್ಮೀರದಿಂದ ಚೀನಾ-ಪಾಕಿಸ್ತಾನದ ಆರ್ಥಿಕ ಕಾರಿಡಾರ್ ಯೋಜನೆಗೆ ಅಡಚಣೆ ಉಂಟಾಗಿದೆ ಎಂಬ ಅಂಶವನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಆದರೆ ಇದಕ್ಕಾಗಿ ಭಾರತವನ್ನು ಹೆಚ್ಚು ಓಲೈಕೆ ಮಾಡಬೇಕಿಲ್ಲ ಎಂದೂ ಅಭಿಪ್ರಾಯಪಟ್ಟಿದೆ. 
ಚೀನಾ-ಪಾಕಿಸ್ತಾನದ ಯೋಜನೆಯ ತಡೆಗೆ ಭಾರತ ಪ್ರಯೋಗಿಸುವ ಸಣ್ಣ ತಂತ್ರಗಳನ್ನು ಎದುರಿಸಲು ಭಾರತವನ್ನು ಹೆಚ್ಚು ಓಲೈಕೆ ಮಾಡಬೇಕಿಲ್ಲ ಎಂದು ಬರೆದಿರುವ ಚೀನಾದ ಗ್ಲೋಬಲ್ ಟೈಮ್ಸ್, ಸೂಪರ್ ಪವರ್ ರಾಷ್ಟ್ರವಾಗಲು ಬಯಸುತ್ತಿರುವ ಭಾರತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ರಾದೇಶಿಕ ಒಗ್ಗೂಡುವಿಕೆ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿದ್ದೇ ಆದಲ್ಲಿ ತನ್ನ ಕನಸು ನೆರವೇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕೆಂದು ಎಚ್ಚರಿಸಿದೆ. 
ಫೋರ್ಬ್ಸ್ ಪತ್ರಿಕೆಯಲ್ಲಿ ಚೀನಾ-ಪಾಕಿಸ್ತಾನದ ಆರ್ಥಿಕ ಕಾರಿಡಾರ್ ಯೋಜನೆ ಕುರಿತು ಅಮೆರಿಕ ಮೂಲದ ವಿಶ್ಲೇಷಕ ಬರೆದಿದ್ದ ವಿಮರ್ಶಾತ್ಮಕ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಗ್ಲೋಬಲ್ ಟೈಮ್ಸ್ ಪತ್ರಿಕೆ ಲೇಖನವನ್ನು ಪ್ರಕಟಿಸಿದ್ದು,  ಭಾರತವನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಚೀನಾ ಅತ್ಯಂತ ಕಡಿಮೆ ಕೆಲಸ ಮಾಡಿದೆ ಎಂದು ಫೋರ್ಬ್ಸ್ ಪತ್ರಿಕೆಯಲ್ಲಿ ಹೇಳಿದ್ದಕ್ಕೆ ತಿರುಗೇಟು ನೀಡಿದ್ದು, ಸಿಪಿಇಸಿಗೆ ಸಂಬಂಧಿಸಿದಂತೆ ಕಾಶ್ಮೀರ ವಿವಾದ ಸಮಸ್ಯೆ ಆಗುವುದೇ ಇದ್ದರೂ  ಭಾರತವನ್ನು ಓಲೈಸಬೇಕಾಗಿಲ್ಲ ಎಂದು ಹೇಳಿದೆ. 
ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರ ಹಾಗೂ ಸಿಪಿಇಸಿ ಗೆ ಸಂಬಂಧಿಸಿದಂತೆ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿರುವ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಇದೇ ಮೊದಲ ಬಾರಿಗೆ ಕಾಶ್ಮೀರ ವಿವಾದದಿಂದ ಸಿಪಿಇಸಿಗೆ ಹಾನಿ ಉಂಟಾಗಲಿದೆ ಎಂಬುದನ್ನು ಒಪ್ಪಿಕೊಂಡಿದೆ. 
SCROLL FOR NEXT