ಲಂಡನ್:ಇಸ್ಲಾಂನ ಗೌರವವನ್ನು ಮತ್ತು ಪಾಕಿಸ್ತಾನದ ಗೌರವವನ್ನು ಹಾಳು ಮಾಡಲು ಪಾಕಿಸ್ತಾನೀಯರೇ ಕಾರಣ ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್ಸೈ ಹೇಳಿದ್ದಾರೆ.
19 ವರ್ಷದ ಇಂಗ್ಲೆಂಡ್ ಮೂಲದ ಪಾಕಿಸ್ತಾನ ಶಿಕ್ಷಣ ಕಾರ್ಯಕರ್ತೆ ಮಲಾಲಾ ವಿಡಿಯೋ ಸಂದೇಶದಲ್ಲಿ, ಇಂದು ಮಶಾಲ ಖಾನ್ ಸಾವಿನ ಸುದ್ದಿ ಕೇಳಿದೆ. ಈ ಘಟನೆ ಹಿಂದೆ ವ್ಯಾಪಕ ಭಯೋತ್ಪಾದನೆ ಮತ್ತು ಹಿಂಸೆಯಿದೆ. ಅವರ ತಂದೆಯ ಜೊತೆ ನಾನು ಮಾತನಾಡಿದ್ದು ಅವರು ಶಾಂತಿ ಮತ್ತು ತಾಳ್ಮೆಯ ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.
ಬೇರೆ ಯಾರೂ ಪಾಕಿಸ್ತಾನ ಮತ್ತು ಇಸ್ಲಾಂನ್ನು ನಾಶಪಡಿಸುತ್ತಿಲ್ಲ,ನಾವೇ ನಮ್ಮ ದೇಶದ ಹೆಸರನ್ನು ಹಾಳು ಮಾಡುತ್ತಿದ್ದೇವೆ. ಇದಕ್ಕೆ ನಾವು ಪಾಕಿಸ್ತಾನಿಯರೇ ಕಾರಣ ಎಂದು ಹೇಳಿದರು.
ಇದು ಮಶಾಲ್ ಖಾನ್ ಅವರ ಅಂತಿಮ ಕಾರ್ಯ ಮಾತ್ರವಲ್ಲ, ನಮ್ಮ ಧರ್ಮಭೋದಕರ ಅಂತಿಮ ಶವ ಸಂಸ್ಕಾರ ಕೂಡ ಹೌದು. ನಾವು ಇಸ್ಲಾಂನ ಬೋಧನೆಗಳನ್ನು ಮರೆತಿದ್ದೇವೆ. ಅದು ಶಾಂತಿ ಮತ್ತು ತಾಳ್ಮೆಯನ್ನು ಬೋಧಿಸುತ್ತದೆ ಎಂದರು.
ಹೀಗೆ ನಾವು ಒಬ್ಬರನ್ನೊಬ್ಬರು ಸಾಯಿಸುತ್ತಾ ಹೋದರೆ ಯಾರೂ ಸುರಕ್ಷಿತವಾಗಿರುವುದಿಲ್ಲ. ಎಂದು ಮಲಾಲಾ ಹೇಳಿದರು.
ಖೈಬರ್ ನ ಅಬ್ದುಲ್ ಕಲ್ ವಾಲಿ ಖಾನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾದ ಮಶಾಲ್ ಖಾನ್ ನನ್ನು ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಕ್ರೂರವಾಗಿ ಗುಂಡಿಕ್ಕಿ ಸಾಯಿಸಿದೆ. ಧರ್ಮವಿರೋಧಿ ವಿಷಯವನ್ನು ಆನ್ಲೈನ್ ನಲ್ಲಿ ಮತ್ತು ಅಹ್ಮದಿ ನಂಬಿಕೆಯ ಪ್ರಚಾರವನ್ನು ಮಾಡುತ್ತಿದ್ದ ಸಂಶಯದ ಮೇಲೆ ವಿದ್ಯಾರ್ಥಿಗಳು ಮಶಾಲ್ ಖಾನ್ ನನ್ನು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.