ಬೀಜಿಂಗ್: ಟಿಬೆಟನ್ ಧರ್ಮಗುರು ದಲೈ ಲಾಮಾ ಅವರನ್ನು ಮುಂದಿಟ್ಟುಕೊಂಡು ಭಾರತ ಕುತಂತ್ರ ಮಾಡಲು ಮುಂದಾದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಸರ್ಕಾರಿ ಮಾಧ್ಯಮ ಭಾರತಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅರುಣಾಚಲ ಪ್ರದೇಶದ ಆರು ಸ್ಥಳಗಳ ಹೆಸರುಗಳನ್ನು ಅಧಿಕೃತವಾಗಿ ಕ್ರಮಬದ್ಧಗೊಳಿಸುವುದು ನಮ್ಮ ಕಾನೂನಾತ್ಮಕ ಹಕ್ಕು ಎಂದು ಶುಕ್ರವಾರ ಚೀನಾ ಹೇಳಿದೆ.
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬ ಭಾರತದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಂಗ್ ಅವರು, 'ಭಾರತ- ಚೀನಾ ಗಡಿಯ ಪೂರ್ವ ಭಾಗದಲ್ಲಿನ ಚೀನಾದ ಸ್ಥಾನ ಸ್ಪಷ್ಟವಾಗಿದೆ ಮತ್ತು ಸ್ಥಿರವಾಗಿದೆ' ಎಂದು ಹೇಳಿದ್ದಾರೆ.
ಮೊಂಬ ಜನಾಂಗ ಮತ್ತು ಟಿಬೆಟಿಯನ್ ಚೀನಿಯರಿಗೆ ಸಂಬಂಧಿಸಿದ ಹೆಸರುಗಳನ್ನು ಅಲ್ಲಿ ಬಳಸಲಾಗಿದೆ ಮತ್ತು ಇದು ಸತ್ಯವಾಗಿದ್ದು, ಇದನ್ನು ಬದಲಿಸಲು ಸಾಧ್ಯವಿಲ್ಲ. ಈ ಹೆಸರುಗಳನ್ನು ಕ್ರಮಬದ್ಧಗೊಳಿಸುವುದು ಮತ್ತು ಅದನ್ನು ಪ್ರಚಾರಪಡಿಸುವುದು ನಮ್ಮ ಕಾನೂನಾತ್ಮಕ ಹಕ್ಕು ಎಂದು ಕಂಗ್ ಹೇಳಿದ್ದಾರೆ.
ನಿನ್ನೆಯಷ್ಟೇ ಅರುಣಾಚಲ ಪ್ರದೇಶದ ಆರು ನಗರಗಳಿಗೆ ಮರುನಾಮಕರಣ ಮಾಡಿರುವ ಚೀನಾದ ಕ್ರಮವನ್ನು ಖಂಡಿಸಿದ್ದ ಭಾರತ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮರುನಾಮಕರಣ ಮಾಡಿದರೆ ಅಕ್ರಮ ಸಕ್ರಮವಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗಲಿ ಅವರು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos