ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಮಸೀದಿಯ ಕಾಣಿಕೆ ಡಬ್ಬದಿಂದ 50,000 ರೂಪಾಯಿ ಕದ್ದ ವ್ಯಕ್ತಿ, ಇದು ತನ್ನ ಮತ್ತು ದೇವರ ನಡುವಿನ ವಿಚಾರವಾಗಿದ್ದು, ಈ ವಿಷಯದಲ್ಲಿ ಯಾರೂ ಕೂಡ ಮೂಗು ತೂರಿಸಬಾರದೆಂದು ಪತ್ರ ಬರೆದಿಟ್ಟಿದ್ದಾನೆ.
ಈ ಘಟನೆ ಕಳೆದ ರಾತ್ರಿ ದಕ್ಷಿಣ ಪಂಜಾಬ್ ನ ಖನೆವಾಲ್ ಜಿಲ್ಲೆಯ ಜಮಿಯಾ ಮಸೀದಿ ಸಾದಿಖುಲ್ ಮದೀನಾದಲ್ಲಿ ನಡೆದಿದೆ.
ಭಕ್ತಾದಿಗಳು ನೀಡುವ ಹಣದ ಎರಡು ಕಾಣಿಕೆ ಡಬ್ಬಿಗಳನ್ನು ಮತ್ತು ವಿದ್ಯುತ್ ಹೋದ ಸಂದರ್ಭದಲ್ಲಿ ಬಳಸುವ ಬ್ಯಾಕ್ ಅಪ್ ಬ್ಯಾಟರಿಗಳನ್ನು ಕದ್ದುಕೊಂಡು ಹೋಗಿದ್ದಾನೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಸುಮಾರು 50,000 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಕದಿಯಲು ಏನು ಕಾರಣವೇನೆಂಬುದನ್ನು ವಿವರಿಸಿದ್ದಾನೆ ಎಂದು ಮಸೀದಿಯ ಪ್ರಾರ್ಥನೆ ಮುಖಂಡ ಖಾರಿ ಸಯೀದ್ ತಿಳಿಸಿದ್ದಾರೆ.
ಈ ವಿಷಯ ನನ್ನ ಮತ್ತು ದೇವರ ನಡುವೆ ಮಾತ್ರ ಇದೆ. ದಯಮಾಡಿ ಯಾರೂ ಕೂಡ ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ. ನನಗೆ ದುಡ್ಡಿನ ಅವಶ್ಯಕತೆ ತುಂಬಾ ಇರುವುದರಿಂದ ದೇವರ ಹುಂಡಿಯಿಂದ ಹಣ ತೆಗೆದಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಮಸೀದಿಗೆ ಈ ಹಿಂದೆ ಒಂದು ಬಾರಿ ಬಂದು ಪ್ರಾರ್ಥನಾ ಮುಖಂಡರಲ್ಲಿ ಸಹಾಯ ಕೋರಿದ್ದೆ. ಆದರೆ ಅವರು ನಿರಾಕರಿಸಿ ನನ್ನನ್ನು ಹೊರದಬ್ಬಿದರು ಎಂದು ಪತ್ರದಲ್ಲಿ ವ್ಯಕ್ತಿ ಬರೆದಿದ್ದಾನೆ.
ಜನರು ಸಹಾಯ ಮಾಡಲು ನಿರಾಕರಿಸಿದಾಗ ನಾನು ಬಲವಂತವಾಗಿ ಮಸೀದಿಯಿಂದ ಕದಿಯಬೇಕಾಗಿ ಬಂತು. ನಾನು ಯಾವತ್ತೂ ಯಾರ ಬಳಿಯಿಂದಲೂ ಏನನ್ನೂ ಕದ್ದಿರಲಿಲ್ಲ. ಅಲ್ಲನ ಮನೆಯಿಂದ ಇದೀಗ ಸ್ವಲ್ಪ ವಸ್ತು ತೆಗೆದುಕೊಂಡು ಹೋಗುತ್ತಿದ್ದು ಇದು ನನ್ನ ಮತ್ತು ಅಲ್ಲಾನ ಮಧ್ಯದ ವಿಷಯ. ನಮ್ಮಿಬ್ಬರ ನಡುವಿನ ವಿಷಯದಲ್ಲಿ ಯಾರು ಕೂಡ ಮೂಗು ತೂರಿಸಬಾರದು ಎಂದು ಪತ್ರದಲ್ಲಿ ಬರೆದಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos