ಪೇಶಾವರ್: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಹಾಗೂ ನಟಿ ಕಾಜೋಲ್ ಅವರನ್ನು ನೋಡಲು ಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಅಭಿಮಾನಿಯೊಬ್ಬ 22 ತಿಂಗಳ ಜೈಲು ವಾಸದ ಬಳಿಕ ಶನಿವಾರ ತವರಿಗೆ ವಾಪಸ್ ಆಗಿದ್ದಾನೆ.
22 ವರ್ಷದ ಅಬ್ದುಲ್, 2017ರ ಮೇ 5ರಂದು ವಾಘಾ ಗಡಿ ದಾಟಿ ಭಾರತಕ್ಕೆ ಬಂದು ಇಲ್ಲಿಯ ಸೇನಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ತಾನು ಶಾರುಖ್ ಹಾಗೂ ಕಾಜೋಲ್ ಅಭಿಮಾನಿಯಾಗಿದ್ದು, ಅವರನ್ನು ನೋಡಲು ಬಂದಿರುವುದಾಗಿ ಹೇಳಿಕೊಂಡಿದ್ದರು.
ಇದಕ್ಕು ಮುನ್ನ ಭಾರತದ ವೀಸಾ ಪಡೆಯಲು ಅಬ್ದುಲ್ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅದು ಕೈಗೂಡದ ಹಿನ್ನೆಲೆಯಲ್ಲಿ ಗಡಿ ದಾಟಿ ಭಾರತಕ್ಕೆ ಬಂದಿದ್ದ ಆತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ 22 ತಿಂಗಳು ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ.
ಪಾಕ್ಗೆ ವಾಪಸ್ ಆಗಿರುವ ಅಬ್ದುಲ್ಲಾಗೆ ಮನೆ ಹಾಗೂ ನೆರೆಹೊರೆಯವರಿಂದ ಆಧರದ ಸ್ವಾಗತ ಸಿಕ್ಕಿದೆ. ಇದೇ ವೇಳೆ ಸ್ಥಳೀಯ ಮಾಧ್ಯಮಕ್ಕೆ ಮಾತನಾಡಿರುವ ಆತ, ಶಾರುಖ್ ಅವರನ್ನು ಭೇಟಿ ಮಾಡಲು ನಾನು ಭಾರತಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಜೈಲಿನ ಪಾಲಾಗಬೇಕಾಯಿತು. ಜೈಲಿನ ಅಧಿಕಾರಿಗಳ ಸಹಕಾರದೊಂದಿಗೆ ಶಾರುಖ್ ಹಾಗೂ ಕಾಜೋಲ್ ಭೇಟಿಗೆ ಭಾರತ ಸರ್ಕಾರಕ್ಕೆ ಪತ್ರ ಬರೆದೆ. ಆದರೆ, ಇದಕ್ಕೆ ಯಾವುದೇ ಉತ್ತರ ಬರಲಿಲ್ಲ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಕಳ್ಳ ದಾರಿಯ (ಕಾನೂನು ಬಾಹಿರವಾಗಿ ) ಮೂಲಕ ಭಾರತವನ್ನು ಪ್ರವೇಶಿಸಬೇಡಿ ಎಂದು ಪಾಕ್ ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಜತೆಗೆ ನಾನೂ ಕೂಡ ಮತ್ತೊಮ್ಮೆ ಆ ಪ್ರಯತ್ನ ಮಾಡೋದಿಲ್ಲ ಎಂದು ಅಬ್ದುಲ್ ಹೇಳಿದ್ದಾರೆ.