ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಆಡಳಿತವನ್ನು ಜಾರಿಗೆ ತಾರದಿರುವುದಕ್ಕೆ ಪಾಕಿಸ್ತಾನ ಸರ್ಕಾರದ ಮೇಲೆ ವಿಶ್ವಸಂಸ್ಥೆ ಘೋಷಿತ ಜಾಗತಿಕ ಭಯೋತ್ಪಾದಕ ಹಾಗೂ ಜಮಾತ್ ಉದ್ ದವಾಹ್ ಮುಖ್ಯಸ್ಥ ಹಫೀಜ್ ಸಯೀದ್ ಹರಿಹಾಯ್ದಿದ್ದಾನೆ.
ಪ್ರವಾದಿ ಮೊಹಮ್ಮದನ ಸಂದೇಶವನ್ನು ನಾಶಮಾಡಲು ಸರ್ಕಾರ ಹೊರಟಿದೆ. ಆದರೆ ಹಾಗೆ ಆಗಲು ನಾವು ಬಿಡಬಾರದು ಎಂದು ಸಯೀದ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಈಗಾಗಲೇ ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ವಜಾಗೊಳಿಸುವ ಮೂಲಕ ಅಮೆರಿಕಾ ಮೂರ್ಖನಾಗಲು ಹೊರಟಿದೆ. ದೇಶದಲ್ಲಿ ರಾಜಕೀಯ ಅಸ್ಥಿರತೆಗೆ ಅಮೆರಿಕಾ ಮತ್ತು ಇಸ್ರೇಲ್ ಕಾರಣವೆಂದು 26/11ರ ಭಯೋತ್ಪಾದಕ ದಾಳಿಯ ರುವಾರಿ ಹಫೀಜ್ ಸಯೀದ್ ಹೇಳಿದ್ದಾನೆ.
ಇಸ್ರೇಲ್ ನ ಅಜೆಂಡಾದಿಂದ ಅಮೆರಿಕಾ ಆಡಳಿತಾತ್ಮಕವಾಗಿ ಪರಿಣಾಮ ಎದುರಿಸುತ್ತದೆ. ಆಫ್ಘಾನಿಸ್ತಾನದಲ್ಲಿ ಕಳೆದುಕೊಂಡ ನಂತರ ಅಮೆರಿಕಾ ಪಾಕಿಸ್ತಾನದ ಜೊತೆಗೆ ಹೊಸ ಯುದ್ಧಕ್ಕೆ ಆರಂಭಿಸಿದೆ. ಪಾಕಿಸ್ತಾನದಲ್ಲಿನ ಒಗ್ಗಟ್ಟು ಉತ್ತಮವಾಗಿ ನನಗೆ ಕಂಡುಬರುತ್ತಿದ್ದರೂ ಕೂಡ ಇನ್ನಷ್ಟು ಹೆಚ್ಚಿನ ಒಗ್ಗಟ್ಟು ಬೇಕಾಗಿದೆ. ಕ್ರಾಂತಿಯನ್ನು ಎಬ್ಬಿಸಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಮುಂದೆ ಬಂದು ಪಾಕಿಸ್ತಾನಕ್ಕೆ ಒಳ್ಳೆಯದಾಗುವ ಕೆಲಸವನ್ನೇನಾದರು ಮಾಡಬೇಕು ಎಂದು ಹಫೀಜ್ ಸಯೀದ್ ಹೇಳಿದ್ದಾನೆ.
ಪಾಕಿಸ್ತಾನದಲ್ಲಿ 2018ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಫೀಜ್ ಯೋಚಿಸುತ್ತಿದ್ದು, ಮಿಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
22/11ರ ಮುಂಬೈ ದಾಳಿಯ ಕೇಸಿನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲವೆಂದು ಪಾಕಿಸ್ತಾನ ಕೋರ್ಟ್ ಸಯೀದ್ ನ್ನು ಇತ್ತೀಚೆಗೆ ಗೃಹ ಬಂಧನದಿಂದ ಬಿಡುಗಡೆ ಮಾಡಿತ್ತು.