ಇಸ್ಲಾಮಾಬಾದ್: ಭಾರತ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್ ಪುರ್ ಕಾರಿಡಾರ್ ಯೋಜನೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪಾಕ್ ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಷಿ ಶನಿವಾರ ಅಧಿಕೃತ ಆಹ್ವಾನ ನೀಡಿದ್ದಾರೆ.
ಪಾಕಿಸ್ತಾನದ ಐತಿಹಾಸಿಕ ಗುರುದ್ವಾರದೊಡನೆ ಭಾರತ ಗಡಿ ಜಿಲ್ಲೆ ಗುರುದಾಸ್ ಪುರ್ ಅನ್ನು ಸಂಪರ್ಕಿಸುವ ಧಾರ್ಮಿಕ ಕಾರಿಡಾರ್ ಯೋಜನೆ ಸಿಖ್ಖ್ ಸಮುದಾಯದ ದೀರ್ಘಾವಧಿಯ ಬೇಡಿಕೆಯಾಗಿದೆ.ಅಂತಿಮವಾಗಿ ಈಗ ಎರಡೂ ರಾಷ್ಟ್ರಗಳು ಯೋಜನೆ ಜಾರಿಗೆ ಆಸಕ್ತಿ ತೋರಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28 ರಂದು ಪಾಕಿಸ್ತಾನದ ಭಾಗದಲ್ಲಿ ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಖುರೇಷಿ, ಕೇಂದ್ರ ಸಚಿವೆ ಸ್ವರಾಜ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಸಚಿವರಾದ ನವಜೋತ್ ಸಿಂಗ್ ಸಿಧು ಅವರನ್ನು ಸಹ ಆಹ್ವಾನಿಸಿದ್ದಾರೆ.
"ಪಾಕಿಸ್ತಾನ ಪರವಾಗಿ ನಾನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಕ್ಯಾಪ್ಟನ್ ಅಮರೀಂದರ್ ಸಿಂಗ್,ಮತ್ತು ನವಜೋತ್ ಸಿಂಗ್ ಸಿಧು ಅವರನ್ನು 2018, ನವೆಂಬರ್ 28 ರಂದು ಕರ್ತಾರ್ ಪುರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಆಮಂತ್ರಣ ನೀಡುತ್ತೇನೆ" ಖುರೇಷಿ ಟ್ವೀಟ್ ಮಾಡಿದ್ದಾರೆ.