ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೊಪಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ಕೆಳ ನ್ಯಾಯಾಲಯದ ತೀರ್ಪನ್ನು ಯುಕೆ ಹೈಕೋರ್ಟ್ ನಲ್ಲಿ ಪ್ರಶ್ನಿಸಲು ತೀರ್ಮಾನಿಸಿದ್ದಾರೆ.
ಕಳೆದ ವಾರ ಲಂಡನ್ ನ ಕೆಳ ನ್ಯಾಯಾಲಯ ಎರಡು ಬಾರಿ ನೀರವ್ ಮೋದಿಗೆ ಜಾಮೀನು ನೀಡಲು ನಿರಾಕರಿಸಿದ ನಂತರ ಮೋದಿ ಯುಕೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಸಾಕ್ಷಿಗಳಿಗೆ ಬೆದರಿಕೆ ಸೇರಿ ನಾನಾ ಕಾರಣಗಳಿಂದ ನೀರವ್ ಮೋದಿಗೆ ಜಾಮೀನು ನೀಡಲು ವೆಸ್ಟ್ ಮಿನಿಸ್ಟರ್ಸ್ ನ್ಯಾಯಾಲಯದ ನ್ಯಾಯಾಧೀಶ ಎಮ್ಮಾ ಅರ್ಬುತ್ನೋಟ್ರ ಅವರ ನಿರ್ಧಾರವನ್ನು ಮೋದಿ ಪ್ರಶ್ನಿಸಲಿದ್ದಾರೆ. "ತನ್ನ ಜಾಮೀನುತಿರಸ್ಕಾರದ ತೀರ್ಪನ್ನು ಪ್ರಶ್ನಿಸಿ ಮನವಿ ಸಲ್ಲಿಸಲು ಮೋದಿ ಉದ್ದೇಶಿಸಿದ್ದಾರೆ. ಆದರೆ ಅವರಿನ್ನೂ ಮೇಲ್ಮನವಿ ಸಲ್ಲಿಸಿಲ್ಲ."ಸಿಪಿಎಸ್ ವಕ್ತಾರರು ಮಂಗಳವಾರ ಹೇಳಿದ್ದಾರೆ.
ಕಳೆದ ಮಾರ್ಚ್ 20ರಂದು ನೀರವ್ ಮೋದಿಯವರ ಜಾಮೀನು ಅರ್ಜಿ ಮೊದಲ ಬಾರಿಗೆ ತಿರಸ್ಕೃತಗೊಂಡಿತ್ತು. ಇದರ ಬೆನ್ನಲ್ಲೇ ಕಳೆದ ವಾರ ಮತ್ತೆ ಜಾಮೀನು ಕೋರಿದಾಗಲೂ ಜಾಮೀನು ಸಿಕ್ಕಿರಲಿಲ್ಲ. ಮುಂದಿನ ವಿಚಾರಣೆ ಏ. 26ರಂದು ನಡೆಯಲಿದ್ದು ಅಲ್ಲಿಯವರೆಗೆ ನೀರವ್ ಮೋದಿ ಲಂಡನ್ ಜೈಲಿನಲ್ಲೇ ಇರಬೇಕಾಗುತ್ತದೆ. ಈ ದಿನಾಂಕದ ನಡುವೆ ಯಾವಗಲಾದರೂ ಮೋದಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದುಎ ಎಂದು ಹೇಳಲಾಗಿದೆ. ಆದರೆ ಮೋದಿ ಪರ ವಕೀಲರು ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.