ವಿದೇಶ

ಶ್ರೀಲಂಕಾದಲ್ಲಿ ನರಮೇಧ: ಬಾಂಬ್ ಸ್ಫೋಟದಲ್ಲಿ 207 ಸಾವು, 400 ಮಂದಿಗೆ ಗಾಯ

Nagaraja AB

ಕೊಲಂಬೊ: ಕ್ರಿಶ್ಚಿಯನ್ನರ  ಪವಿತ್ರ ದಿನವಾದ ಇಂದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಕ್ತದೋಕುಳಿ ಹರಿದಿದೆ.ಎಂಟು ಕಡೆ ನಡೆದ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ  35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ. 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎಫ್ ಪಿ ವರದಿ ಮಾಡಿದೆ.

ಬಹುತೇಕ ಆತ್ಮಾಹುತಿ ಬಾಂಬರ್ ದಾಳಿಯಾಗಿದ್ದು, ಈ ದಾಳಿಯ ಹಿಂದೆ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಏಳು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ  ತಿಳಿಸಿದ್ದಾರೆ.

ಕೊಲಂಬೊದಲ್ಲಿನ ಮೂರು ಹೋಟೆಲ್ ಹಾಗೂ ಚರ್ಚ್ ನಲ್ಲಿ ಮೊದಲ ಬಾಂಬ್ ಸ್ಟೋಟಿಸಿದ್ದರೆ, ಕೊಲಂಬೊ ಹೊರವಲಯದಲ್ಲಿನ ಇನ್ನಿತರ ಎರಡು ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬ್ ಸ್ಟೋಟಿಸಿದೆ. ತದನಂತರ ದಾಹಿವಾಲಾದಲ್ಲಿನ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದಲ್ಲಿನ ಎದುರುಗಡೆಯ ಹೋಟೆಲ್ ನಲ್ಲಿ ಮತ್ತೊಂದು ಬಾಂಬ್ ಸ್ಟೋಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಕಾಲಮಾನ ಬೆಳಗ್ಗೆ 8-45 ರ ಸುಮಾರಿನಲ್ಲಿ  ಬಾಂಬ್ ಸ್ಟೋಟಿಸಿದ್ದು, ಆದರೆ, ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ಹೇಯಕೃತ್ಯವನ್ನು ಶ್ರೀಲಂಕಾ ಪ್ರಧಾನಿ ಖಂಡಿಸಿದ್ದು, ಸದೃಢ ಹಾಗೂ ಐಕ್ಯತೆಯಿಂದ ಇರುವಂತೆ ಜನತೆಗೆ ಕರೆ ನೀಡಿದ್ದಾರೆ. ವದಂತಿಗಳನ್ನು ಹರಡದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಈ ಘಟನೆಯನ್ನು ಖಂಡಿಸಿದ್ದು, ನಮ್ಮ ವಲಯದಲ್ಲಿ ಬರ್ಬರ ಕೃತ್ಯಕ್ಕೆ ಅವಕಾಶವಿಲ್ಲ, ಶ್ರೀಲಂಕಾ ಜನರೊಂದಿಗೆ ಭಾರತ ಇರುವುದಾಗಿ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಭಾರತದ ಹೈ ಕಮೀಷನರ್  ಅಲ್ಲಿಯೇ ಇದ್ದು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
SCROLL FOR NEXT