ಜರ್ಮನಿಗೆ ತೆರಳಿದೆ ನಿರ್ಮಲಾ ಸೀತಾರಾಮನ್
ಬರ್ಲಿನ್: ಜರ್ಮನಿ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜರ್ಮನಿ ರಕ್ಷಣಾ ಕಾರ್ಯದರ್ಶಿ ಉರ್ಸುಲಾ ವಾನ್ ಡೆರ್ ಲೇನ್ ಅವರನ್ನು ಭೇಟಿ ಮಾಡಿದ್ದು, ಹಲವು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಪ್ರಕಟಿಸಿದ್ದು, ಬುಧವಾರ ಜರ್ಮನಿ ರಕ್ಷಣಾ ಕಾರ್ಯದರ್ಶಿ ಉರ್ಸುಲಾ ವಾನ್ ಡೆರ್ ಲೇನ್ ಅವರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್ ಅವರು, ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಉಭಯ ನಾಯಕರೂ ಪರಸ್ಪರ ರಕ್ಷಣಾ ಸಹಕಾರ ಕೋರಿದ್ದು, ಜಂಟಿ ಮಿಲಿಟರಿ ತರಬೇತಿ, ರಕ್ಷಣಾ ಕೈಗಾರಿಕೆ, ರಕ್ಷಣಾ ಸಂಶೋಧನೆ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಅಂತೆಯೇ ಅಂತಾರಾಷ್ಟ್ರೀಯ ವಿಚಾರಗಳಲ್ಲೂ ಜರ್ಮನಿ ಭಾರತದ ಪರವಿರುವುದಾಗಿಯೂ ಮತ್ತು ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವುದೇ ವಿಚಾರಕ್ಕೆ ತಾನು ಬೆಂಬಲ ನೀಡುವುದಿಲ್ಲ ಎಂಬ ಭರವಸೆ ನೀಡಿದೆ.
ಈ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಉಪಖಂಡ (ಭಾರತ) ಶಾಂತಿಪ್ರಿಯ ದೇಶವಾಗಿದ್ದು, ಜರ್ಮನಿಯಂತಹ ಸಮಾನ ಮನಸ್ಕ ರಾಷ್ಟ್ರಗಳೊಂದಿಗಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಬಯಸುತ್ತದೆ. ವಿಶ್ವಕ್ಕೆ ಶಾಂತಿ ಪ್ರಿಯ ವಾತಾವರಣ ನಿರ್ಮಾಣಕ್ಕೆ ಭಾರತ ಸದಾ ಮುಂದಿದ್ದು. ಪರಸ್ಪರರ ಆಸಕ್ತಿಗೆ ಭಾರತ ಗೌರವ ನೀಡುತ್ತದೆ ಎಂದು ಹೇಳಿದರು.
ಜರ್ಮನಿಗೆ ಭೇಟಿ ನೀಡುವಂತೆ ಈ ಹಿಂದೆ ಉರ್ಸುಲಾ ವಾನ್ ಡೆರ್ ಲೇನ್ ಅವರು ನಿರ್ಮಲಾ ಅವರಿಗೆ ಅಹ್ವಾನ ನೀಡಿದ್ದರು. ಅದರಂತೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 12 ಮತ್ತು 13ರಂದು ಭೇಟಿ ನೀಡಿದ್ದಾರೆ. ತಮ್ಮ 2 ದಿನಗಳ ಭೇಟಿ ವೇಳೆ ನಿರ್ಮಲಾ ಸೀತಾರಾಮನ್ ಅವರು, ಜರ್ಮನಿಯ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಿದರು. ಬಳಿಕ ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos