ವಿದೇಶ

ಮೊದಲು ನಿಮ್ಮ ನೆಲದಲ್ಲಿರುವ ಉಗ್ರರ ಅಡಗುದಾಣಗಳ ನಾಶ ಮಾಡಿ: ಪಾಕ್ ಕಿವಿ ಹಿಂಡಿದ ಜರ್ಮನಿ

Srinivasamurthy VN
ಬರ್ಲಿನ್: ಮೊದಲು ನಿಮ್ಮ ನೆಲದಲ್ಲಿರುವ ಉಗ್ರರ ಆಡಗುದಾಣಗಳನ್ನು ನಾಶ ಮಾಡಿ ಎಂದು ಪಾಕಿಸ್ತಾನಕ್ಕೆ ಜರ್ಮನಿ ಕಿವಿ ಹಿಂಡಿದೆ.
ಇಂಡೋ-ಪಾಕ್ ನಡುವಿನ ವಾಯು ಕದನ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜರ್ಮನಿ ಪಾಕಿಸ್ತಾನಕ್ಕೆ ತಿವಿದಿದ್ದು, ಮೊದಲು ನಿಮ್ಮ ದೇಶದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶ ಮಾಡಿ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಜರ್ಮನಿ ವಿದೇಶಾಂಗ ಸಚಿವ ಹೈಕೊ ಮಾಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪುಲ್ವಾಮ ಉಗ್ರ ದಾಳಿಯ ಬಳಿಕ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಇರುವಿಕೆ ಸ್ಪಷ್ಟವಾಗಿದೆ. ಸ್ವತಃ ಪಾಕಿಸ್ತಾನ ಮೂಲದ ಜೈಶ್ ಉಗ್ರ ಸಂಘಟನೆ ಪುಲ್ವಾಮ ದಾಳಿಯ ನೇತೃತ್ವ ವಹಿಸಿರುವುದಾಗಿ ಹೇಳಿಕೊಂಡಿದೆ. ಹೀಗಾಗಿ ಮೊದಲು ಪಾಕಿಸ್ತಾನ ತನ್ನ ದೇಶದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶ ಮಾಡಬೇಕು. ಕೇವಲ ಅಡಗುದಾಣಗಳನ್ನು ನಾಶ ಮಾಡುವುದಲ್ಲದೇ ಅಲ್ಲಿರುವ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿ ಎಲ್ಲ ಉಗ್ರರನ್ನು ನಾಶ ಮಾಡಬೇಕು ಎಂದು ಹೇಳಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಮಾಸ್, ಇಂಡೋ-ಪಾಕ್ ನಡುವೆ ಭುಗಿಲೆದ್ದಿರುವ ಸಂಘರ್ಷ ವಿಚಾರವಾಗಿ ಸಂಯಮದಿಂದ ವರ್ತಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಅಂತೆಯೇ ಏಷ್ಯಾಖಂಡದ ಪರಮಾಣು ರಾಷ್ಟ್ರಗಳ ನಡುವಿನ ಸಂಘರ್ಷ ವಿಚಾರವಾಗಿ ಜರ್ಮನಿ ಕಳವಳದಿಂದ ಇದ್ದು, ಪರಿಸ್ಥಿತಿ ತಿಳಿಗೊಳಿಸಲು ತಾನು ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದು ಹೇಳಿದೆ.
ಕಾಶ್ಮೀರ ವಿಚಾರ ನಾವು ಅಂದುಕೊಂಡಂತೆ ಇಲ್ಲ ಎಂಬುದು ನಮಗೂ ತಿಳಿದಿದೆ. ಆದರೆ ಅಲ್ಲಿ ಶಾಂತಿ ಸ್ಥಾಪನೆ ವಿಚಾರ ಇಂಡೋ-ಪಾಕ್ ದೇಶಗಳಿಗೆ ಬಿಟ್ಟಿದ್ದು. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆ ಉನ್ನತ ಮಟ್ಟದಲ್ಲಿ ಸಂಧಾನ ಕಾರ್ಯ ನಡೆಯಬೇಕು ಎಂದು ಹೇಳಿದೆ.
ಅಂತೆಯೇ ಪುಲ್ವಾಮ ಉಗ್ರ ದಾಳಿಗೆ ಕಾರಣರಾದ ಉಗ್ರರು ಯಾವುದೇ ಕಾರಣಕ್ಕೂ ಸ್ವತಂತ್ರರಾಗಿ ತಿರುಗಾಡಬಾರದು. ಅವರಿಗೆ ಖಂಡಿತಾ ಉಗ್ರ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಪಾಕಿಸ್ತಾನ ಕೆಲಸ ಮಾಡಬೇಕು.
SCROLL FOR NEXT