ಬಾಂಬ್ ಸ್ಫೋಟ ಸಂಭವಿಸಿದ ಕೊಲಂಬೊ ಚರ್ಚ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಕೊಲಂಬೊ: ಕಳೆದ ಏಪ್ರಿಲ್ ತಿಂಗಳಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಈಸ್ಟರ್ ಸಂಡೆಯ ದಿನ ನಡೆದ ಭಯೋತ್ಪಾದಕ ದಾಳಿಯ ಸ್ಥಳವಾದ ಚರ್ಚ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿ ಅಗಲಿದ ನಾಗರಿಕರಿಗೆ ಗೌರವ ನಮನ ಸಲ್ಲಿಸಿದರು.
ಶ್ರೀಲಂಕಾ ಪ್ರವಾಸವನ್ನು ಇಂದು ಕೊಚ್ಚಿಕಾಡ್ ನ ಸೈಂಟ್ ಆಂಥೊನಿ ಚರ್ಚ್ ಗೆ ಭೇಟಿ ನೀಡಿ ಅಗಲಿದ ನಾಗರಿಕರಿಗೆ ಗೌರವ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ನನ್ನ ಸಂತಾಪಗಳು ಮತ್ತು ಅವರ ಕುಟುಂಬವರ್ಗದವರಿಗೆ ಸಾಂತ್ವನಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
2009ರಲ್ಲಿ ನಡೆದ ಭೀಕರ ನಾಗರಿಕ ಯುದ್ಧದ ನಂತರ ನಡೆದ ಹಿಂಸಾಚಾರದ ನಂತರ ಶ್ರೀಲಂಕಾದಲ್ಲಿ ನಡೆದ ಘನಘೋರ ಭಯೋತ್ಪಾದಕ ದಾಳಿ ಇದಾಗಿತ್ತು. 9 ಮಂದಿ ಆತ್ಮಹತ್ಯಾ ಬಾಂಬ್ ದಾಳಿಕೋರರು ಜೀವಕ್ಕೆ ಹಾನಿಯನ್ನುಂಟುಮಾಡುವ ಸ್ಫೋಟ ನಡೆಸಿದ್ದು ಕೊಲಂಬೊದ ಸೈಂಟ್ ಆಂಟನಿ ಚರ್ಚ್, ನೆಗೊಂಬೊವಿನ ಪಾಶ್ಚಾತ್ಯ ಕರಾವಳಿ ಪಟ್ಟಣದ ಸೈಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಬಟ್ಟಿಕಲೊಯದ ಪೂರ್ವ ಪಟ್ಟಣದಲ್ಲಿರುವ ಚರ್ಚ್ ಮೇಲೆ ಸರಣಿ ಬಾಂಬ್ ಸ್ಫೋಟವುಂಟಾಗಿತ್ತು.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತರೆ, ಶ್ರೀಲಂಕಾ ಸರ್ಕಾರ ಮಾತ್ರ ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದನಾ ಸಂಘಟನೆ ನ್ಯಾಶನಲ್ ಥವೀದ್ ಜಮ್ಮತ್ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿತ್ತು.
ಈ ರೀತಿಯ ಹೇಡಿ ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಶ್ರೀಲಂಕಾ ಮಂದಿ ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos