ವಿದೇಶ

ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ನಡೆಸಿದ್ರೆ ನಮ್ಮ ಗತಿ ಏನು: ಪಾಕ್ ಸಚಿವ ಅಳಲು

Raghavendra Adiga
ಇಸ್ಲಾಮಾಬಾದ್: ಭಾರತದ ವಾಯುಸೇನೆ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಇಂದು ಪಾಕಿಸ್ತಾನ ಬಿಡುಗಡೆಗೊಳಿಸುತ್ತಿದ್ದು ವಾಘಾ ಗಡಿ ಸೇರಿ ದೇಶಾದ್ಯಂತ ಅವರ ಸ್ವಾಗತಕ್ಕೆ ಸಂಭ್ರಮದಿಂದ ಎದುರು ನೋಡುತ್ತಿದೆ. ಆದರೆ ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹಮ್ಮದ್ ಮಾತ್ರ ಅಭಿನಂದನ್ ಅವರನ್ನು ಭಾರತಕ್ಕೆ ಮರಳಿಸುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಒಂದೊಮ್ಮೆ ಅಭಿನಂದನ್ ಅವರನ್ನು ಭಾರತಕ್ಕೆ ಹಿಂದಿರುಗಿಸಿದರೆ ಅದರ ಬೆನ್ನಲ್ಲೇ ಭಾರತ ಮತ್ತೆ ದೊಡ್ಡ ದಾಳಿ ನಡೆಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ" ಅವರು ಹೇಳಿದ್ದಾರೆ.
ಅವಾಮಿ ಮುಸ್ಲಿಮ್ ಲೀಗ್ ಮುಖಂಡರಾಗಿರುವ ಅಹಮ್ಮದ್ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿ "ಇದು ವಾಜಪೇಯಿಯವರ ಕಾಲವಲ್ಲ, ಮೋದಿ ವಿಭಿನ್ನ ಯೋಚನೆ ಲಹರಿಯುಳ್ಳ ವ್ಯಕ್ತಿ.ಮೋದಿ ಭಾರತದ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.ಆದರೆ ನಾವೇನಾದರೂ ಭಾರತದ ಐಎ ಎಫ್ ಪೈಲಟ್ ಅವರನ್ನು ಹಿಂದಕ್ಕೆ ಕಳಿಸಿದ ಬಳಿಕ ಭಾರತ ಮತ್ತೆ ದಾಳಿ ನಡೆಸಿದರೆ ನಮ್ಮ ಗತಿ ಏನು? ಅಲ್ಲಿ ಮೋದಿ ಇದ್ದಾರೆ. ನಾಳೆ ಮತ್ತೆ ದಾಳಿಯಾದರೆ ನಾವೇನು ಮಾಡೋಣ?" ಅವರು ಪ್ರಶ್ನಿಸಿದ್ದಾರೆ.
ಪಾಕ್ ರೈಲ್ವೆ ಸಚಿವರು ಭಾರತದ ದಾಳಿಯ ಹಿನ್ನೆಲೆಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದಾರೆ.
"ಕಾರ್ಗಿಲ್ ವೇಳೆ ಒಂದು ಭಾರತೀಯ ವಿಮಾನ ಪಾಕ್ ಗಡಿಯಲ್ಲಿ ಅಪಘಾತಕ್ಕೀಡಾಗಿ ಬಿದ್ದಾಗಲೂ ಭಾರತ ಗಡಿ ನಿಯಂತ್ರಣ ರೇಖೆ ದಾಟಿಲ್ಲ. ಆದರೆ ಮೊನ್ನೆ ಮಂಗಳವಾರ 14 ಜೆಟ್ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದೆ." ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
SCROLL FOR NEXT