ಇಸ್ಲಾಮಾಬಾದ್: ನಾವು ಶಾಂತಿ ಪ್ರಿಯರು ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಸರ್ಕಾರ ಮುಖವಾಡವನ್ನು ಅವರದೇ ದೇಶದ ಸಂಸದನೋರ್ವ ಬಟಾಬಯಲು ಮಾಡಿದ್ದು, ಪುಲ್ವಾಮ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡವಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಕಳೆದ ಫೆಬ್ರವರಿಯಲ್ಲಿ 44 ಮಂದಿ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರದ ನೇರ ಕೈವಾಡವಿರುವುದು ಇದೀಗ ಅವರದೇ ದೇಶದ ಸಂಸದನಿಂದ ಬಟಾ ಬಯಲಾಗಿದ್ದು, ಪುಲ್ವಾಮ ದಾಳಿ ಇಮ್ರಾನ್ ಖಾನ್ ಸರ್ಕಾರದ ಮಹತ್ವದ ನಡೆಯಾಗಿದೆ ಎಂದು ಸಂಸದ ಬಣ್ಣಿಸಿದ್ದಾನೆ.
ಇಸ್ಲಾಮಾಬಾದ್ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್ಎಸ್ಐ) ಏರ್ಪಡಿಸಿದ ಪಾಕಿಸ್ತಾನ-ಚೀನಾ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ಸದಸ್ಯರಾದ ಹುಸೇನ್ ಅವರು, ‘ಪುಲ್ವಾಮಾ ದಾಳಿ ಬಳಿಕ ವಾಯುದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕಚ್ಚಾಟದ ಸಂದರ್ಭದಲ್ಲಿ ಇಡೀ ದೇಶವೇ ಒಂದಾಗಿತ್ತು. ಇದರಿಂದಾಗಿಯೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿತು,’ ಎಂದು ಪ್ರತಿಪಾದಿಸಿದರು.
ಮುಂದುವರಿದ ಅವರು, ನಾವು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಂಡೆವು. ಇದರಿಂದಾಗಿಯೇ ಅಂತಾರಾಷ್ಟ್ರೀಯ ಮತ್ತು ದೇಶದ ಜನತೆ ನಮ್ಮ ಪರ ಧ್ವನಿಯೆತ್ತುವಂತಾಯಿತು. 1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ 20 ವರ್ಷದ ಬಳಿಕ ಪುಲ್ವಾಮಾ ದಾಳಿಯು ಪಾಕಿಸ್ತಾನದ ಅತ್ಯುತ್ತಮ ನಡೆಯಾಗಿದೆ ಎಂದು ಸಂಸದ ಮುಷಾಹಿದ್ ಹುಸೇನ್ ಸಯದ್ ಹೇಳಿದ್ದಾರೆ.