ನವದೆಹಲಿ: ಭಾರತ ಮತ್ತು ಜಪಾನ್ ನಡುವಣ ಶಾಂತಿ, ಭದ್ರತೆಗೆ ದ್ವಿಪಕ್ಷೀಯ ಸಹಕಾರ ಬಲವರ್ಧನೆಗೆ ಹೊಸ ಉಪಕ್ರಮಗಳ ಅನುಷ್ಠಾನ ಕುರಿತು ಸೋಮವಾರ ಚರ್ಚಿಸಲಾಯಿತು.
ಟೋಕಿಯೋದಲ್ಲಿ ನಡೆಸ ಸಭೆಯಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮತ್ತು ಜಪಾನ್ ರಕ್ಷಣಾ ಸಚಿವ ರಕೇಶಿ ಐವಾ ಮಾತುಕತೆ ನಡೆಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಾದೇಶಿಕ ಶಾಂತಿ ಕಾಪಾಡುವ, ಭದ್ರತೆ ಮತ್ತು ಸ್ಥಿರತೆ ಕುರಿತಂತೆ ಉಭಯ ದೇಶಗಳ ನಡುವಣ ವಿಶೇಷ ತಾಂತ್ರಿಕ ಮತ್ತು ಜಾಗತಿಕ ಪಾಲುದಾರಿಕೆ ಮಹತ್ವ ಕುರಿತು ಚರ್ಚೆ ನಡೆದಿದೆ.
ಆಸಿಯಾನ್ (ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘದ) ನಿಯಮಗಳನ್ನು ಕೇಂದ್ರೀಕರಿಸಿ ಭಾರತದ ಆದ್ಯತೆ ಕುರಿತಂತೆ ಭಾರತ – ಪೆಸಿಫಿಕ್ ನೋಟ ಕುರಿತೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಪಾಕಿಸ್ತಾನದಿಂದ ಗಡಿ ಭಯೋತ್ಪಾದನೆ ಹುಟ್ಟುತ್ತಿದ್ದು ಜೊತೆ ಜೊತೆಗೇ ಮಾತುಕತೆ ಸಾಧ್ಯವಿಲ್ಲ ಎಂದು ರಾಜ್ ನಾಥ್ ಸಿಂಗ್ ಹೇಳಿದ್ದಾರೆ. ಲಕ್ನೋದಲ್ಲಿ ನಡೆಯಲಿರುವ ರಕ್ಷಣಾ ಪ್ರದರ್ಶನ 2020 ರಲ್ಲಿ ಪಾಲ್ಗೊಳ್ಳುವಂತೆ ಅವರು ಜಪಾನಿ ಕಂಪೆನಿಗಳನ್ನು ಇದೇ ಸಂದರ್ಭದಲ್ಲಿ ಆಹ್ವಾನಿಸಿದರು.
ಜಮ್ಮು ಕಾಶ್ಮೀರಕ್ಕೆ ಸಂವಿಧಾನ ವಿಧಿ 370 ರ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಕುರಿತೂ ವಿಷಯ ಪ್ರಸ್ತಾಪವಾಗಿ, ಇದು ದೇಶದ ಆಂತರಿಕ ವಿಚಾರ ಎಂದು ಜಪಾನ್ ಗೆ ರಾಜ್ ನಾಥ್ ಸಿಂಗ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಐದು ದಿನಗಳ ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ರಾಜ್ ನಾಥ್ ಸಿಂಗ್ ಸೋಮವಾರ ಬೆಳಗ್ಗೆ ಟೋಕಿಯೋ ತಲುಪಿದ್ದಾರೆ. ನಂತರ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೂ ಮಾತುಕತೆ ನಡೆಸಿದರು.
ರಕ್ಷಣಾ ಉಪಕರಣ ಮತ್ತು ತಂತ್ರಜ್ಞಾನ ಸಹಕಾರ ಕುರಿತಂತೆ ಹೆಚ್ಚು ಸಹಕಾರದ ಅಗತ್ಯ ಕುರಿತು ಶಿಂಜೋ ಅಬೆ ಅವರೊಂದಿಗೆ ಚರ್ಚಿಸಲಾಯಿತು. ನ್ಯೂಯಾರ್ಕ್ ನಲ್ಲಿ ಈ ತಿಂಗಳಲ್ಲಿ ನಡೆಯಲಿರುವ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿರುವುದಾಗಿ ಅಬೆ ತಿಳಿಸಿದ್ದಾರೆ.