ಜಿನೀವಾ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧೇಯಕ ರದ್ದಾದ ಬಳಿಕ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ಬಂಧನ ಸೇರಿದಂತೆ ಕಾಶ್ಮೀರಿಗಳ ಮಾನವ ಹಕ್ಕುಗಳ ಮೇಲೆ ಭಾರತ ಸರ್ಕಾರದ ಇತ್ತೀಚಿನ ಕ್ರಮಗಳ ಪರಿಣಾಮದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ಮಿಚೆಲ್ ಬ್ಯಾಚೆಲೆಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಮಂಡಳಿಯ ಸಭೆಯ ಉದ್ಘಾಟನೆಯ 42ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಬ್ಯಾಚೆಲೆಟ್, ತಮ್ಮ ಕಚೇರಿಯು ಗಡಿ ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ವರದಿಗಳನ್ನು ಸ್ವೀಕರಿಸುತ್ತಲೇ ಇದೆ. ಭಾರತ ಸರ್ಕಾರ ಕಾಶ್ಮೀರದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದರು.
ಭಾರತ ಸರ್ಕಾರವು ಕಾಶ್ಮೀರಿಗಳ ಮಾನವ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದರು.
ಇಂಟರ್ನೆಟ್ ಸಂವಹನ ಮತ್ತು ಶಾಂತಿಯುತ ಸಭೆಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದರು.