ವಿದೇಶ

ತುಂಬು ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ, ಮಗು ಮುಖ ನೋಡುವುದಕ್ಕೂ ಮುನ್ನವೇ ಹೃದಯಾಘಾತದಿಂದ ಕಣ್ಮುಚ್ಚಿದ ಪತಿ!

Manjula VN

ದುಬೈ: ತುಂಬು ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿದ ಒಂದೇ ತಿಂಗಳಿನಲ್ಲಿ ಮಗುವಿನ ಮುಖ ನೋಡುವುದಕ್ಕೂ ಮುನ್ನವೇ ಮಲಗಿದ್ದ ಸ್ಥಳದಲ್ಲಿಯೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.

ನಿತೀನ್ ಚಂದ್ರ (28) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಲಾಕ್'ಡೌನ್ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕೊಂಡಿದ್ದ ತಮ್ಮ ಗರ್ಭಿಣಿ ಪತ್ನಿ ಅಥಿರಾ ಗೀತಾ ಶ್ರೀಧರನ್ ಅವರನ್ನು ಭಾರತಕ್ಕೆ ಕಳುಹಿಸುವ ಸಲುವಾಗಿ ನಿತೀನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 

ಏಪ್ರಿಲ್ ತಿಂಗಳಿನಲ್ಲಿ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಶೇಷ ವಿಮಾನ ಮೂಲಕ ಕೇರಳ ರಾಜ್ಯಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು. 

ಬಳಿಕ ಭಾರತ ಸರ್ಕಾರ ಜಾರಿಗೆ ತಂದಿದ್ದ ವಂದೇ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗರ್ಭಿಣಿ ಗೀತಾ ಅವರನ್ನು ಕೇರಳಕ್ಕೆ ವಾಪಸ್ ಬಂದಿದ್ದರು. ಆದರೆ, ಕೆಲಸದ ನಿಮಿತ್ತ ನಿತಿನ್ ಅವರು ಪತ್ನಿ ಜೊತೆಗೆ ಭಾರತಕ್ಕೆ ಬಂದಿರಲಿಲ್ಲ. ಜೂನ್ 2ನೇ ತಾರೀಖು 28 ವರ್ಷ ಪೂರೈಸಿದ್ದ ನಿತಿನ್ ಅವರು ಜುಲೈ ತಿಂಗಳಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ತಮ್ಮ ಮಗುವಿನ ಮುಖವನ್ನು ನೋಡುವುದಕ್ಕೂ ಮುಂಚೆಯೇ ನಿತಿನ್ ಇಹಲೋಕ ತ್ಯಜಿಸಿದ್ದಾರೆ. 

ನಿತಿನ್ ಚಂದ್ರನ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಜೂನ್.7ರ ರಾತ್ರಿ ನಿದ್ರೆ ಮಾಡುತ್ತಿದ್ದ ಸಮಯದಲ್ಲಿಯೇ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಥಿರಾ ಕೂಡ ದುಬೈನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿತಿನ್ ಅವರು ನಿರ್ಮಾಣ ಕ್ಷೇತ್ರವೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಆರು ವರ್ಷಗಳಿಂದ ನಿತಿನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅಥಿರಾ ಎರಡು ವರ್ಷದ ಹಿಂದಷ್ಟೇ ದುಬೈಗೆ ಹೋಗಿದ್ದರು. 

SCROLL FOR NEXT