ವಿದೇಶ

ಭಗವದ್ಗೀತೆ ಅಭ್ಯಾಸ ಮಾಡಿದರೆ ಶಾಂತಿ, ಧೈರ್ಯ ಹೊಂದಬಹುದು; ಅಮೆರಿಕ ಸಂಸದೆ

Lingaraj Badiger

ವಾಷಿಂಗ್ಟನ್: ಪ್ರಸ್ತುತ ಸೃಷ್ಟಿಯಾಗಿರುವ ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಭಗವದ್ಗೀತೆ, ಕರ್ಮಯೋಗ ಅಭ್ಯಾಸ ಮಾಡಿದರೆ ಶಾಂತಿ, ಸ್ಪಷ್ಟತೆ ಹಾಗೂ ಧೈರ್ಯವನ್ನು ಹೊಂದಬಹುದು ಎಂದು ಅಮೆರಿಕದ ಮೊದಲ ಹಿಂದೂ ಮಹಿಳಾ ಸಂಸದೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

ಕೋವಿಡ್ -೧೯, ಜಾರ್ಜ್ ಫ್ಲಾಯ್ಡ್ ಹತ್ಯೆಯಂತಹ ಘಟನೆಗಳಿಂದ ಪ್ರಸ್ತುತ ಅಮೆರಿಕಾದಲ್ಲಿ ಆಯೋಮಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಇದೇ ಸಮಯದಲ್ಲಿ, ‘ಕ್ಲಾಸ್ ಆಫ್ ೨೦೨೦ ಫರ್ ಹಿಂದೂ ಸ್ಟೂಡೆಂಟ್ಸ್’ ಹೆಸರಿನಲ್ಲಿ ಆಯೋಜಿಸಿದ್ದ ವರ್ಚುವಲ್ ಸಭೆಯನ್ನುದ್ದೇಶಿಸಿ ತುಳಸಿ ಗಬ್ಬರ್ಡ್ ಮಾತನಾಡಿದರು. ಈ ಸಮಾವೇಶದಲ್ಲಿ ಅಮೆರಿಕಾದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದೇಶದಲ್ಲಿ ನಾಳೆ ಏನು ನಡೆಯಲಿದೆ ಎಂಬುದನ್ನು ತಿಳಿಯದ ಆಯೋಮಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆಯನ್ನು ಅಭ್ಯಾಸ ಮಾಡಿದರೆ ಶಾಂತಿ ಧೈರ್ಯ ಪಡೆದುಕೊಳ್ಳಬಹುದು ಎಂದರು,

ಜೀವನದಲ್ಲಿ ನನ್ನ ಗುರಿ ಏನು? ಎಂಬುದನ್ನು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ. ಕರ್ಮ ಯೋಗವನ್ನು ಅಭ್ಯಾಸ ಮಾಡುವ ಮೂಲಕ ದೇವರು ಮತ್ತು ದೇವರ ಮಕ್ಕಳ ಸೇವೆ ಮಾಡುವುದು ನಿಮ್ಮ ಗುರಿ ಎಂದು ನೀವು ಕಂಡುಕೊಂಡರೆ ನೀವು ಯಶಸ್ವಿ ಜೀವನ ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಅವರು ಹೇಳಿದರು.

ಅಮೆರಿಕದಲ್ಲಿ ಹಿಂದೂ ವಿದ್ಯಾರ್ಥಿ ಕೌನ್ಸಿಲ್ ಅನ್ನು ೧೯೯೦ ರಲ್ಲಿ ಸ್ಥಾಪಿಸಲಾಯಿತು. ಇದು ಉತ್ತರ ಅಮೆರಿಕದ ಅತಿದೊಡ್ಡ ಹಿಂದೂ ಯುವ ಸಂಘಟನೆಯಾಗಿದೆ. ತುಳಸಿ ಗಬ್ಬಾರ್ಡ್ ೧೯೮೧ ರಲ್ಲಿ ಅಮೆರಿಕದ ಸಮೋವಾದಲ್ಲಿ ಜನಿಸಿದ್ದು, ಅವರು ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಅಮೆರಿಕ ಸಂಸತ್ತಿಗೆ ಆಯ್ಕೆಯಾದ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಸಂಸತ್ ಪ್ರವೇಶಿಸಿದ ಮೊದಲ ಹಿಂದೂ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಹಿಂದೂ ಧರ್ಮದ ಮೇಲೆ ಅಚಲ ನಂಬಿಕೆಯುಳ್ಳ ತುಳಸಿ ಗಬ್ಬಾರ್ಡ್, ಅಮೆರಿಕದಲ್ಲಿ ಭಾರತೀಯರ ಭಾರಿ ಬೆಂಬಲ ಹೊಂದಿದ್ದಾರೆ.

SCROLL FOR NEXT