ವಿದೇಶ

ಕೊರೊನಾ ವೈರಸ್ ಗೆ ಭಾರತೀಯರು ಭಯಪಡುವ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ 

Sumana Upadhyaya

ಜಿನಿವಾ: ಕೊರೊನಾ ವೈರಸ್ ನಿಂದ ಭಾರತೀಯರು ಭಯಪಡುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಧೈರ್ಯ ತುಂಬಿದೆ.


ವಿಶ್ವ ಆರೋಗ್ಯ ಸಂಸ್ಥೆಯ ಸ್ಥಳೀಯ ತುರ್ತು ನಿರ್ದೇಶಕ ಡಾ ರೊಡ್ರಿಕೊ ಒಫ್ರಿನ್, ಭಾರತೀಯರು ವಿದೇಶಗಳಿಗೆ ಪ್ರಯಾಣಿಸುತ್ತಿರುವುದರಿಂದ ಕೊರೊನಾ ವೈರಸ್ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ವಿದೇಶಿ ನೆಲದಲ್ಲಿ ಸೋಂಕು ತಗುಲಿಸಿಕೊಳ್ಳುತ್ತಾರೆ, ಇದರಿಂದ ಭೀತಿಗೊಳಗಾಗುವ ಅಗತ್ಯವಿಲ್ಲ ಎಂದರು.


ಭಾರತದಲ್ಲಿ 29 ಮಂದಿಗೆ ಈಗಾಗಲೇ ಕೊರೊನಾ ವೈರಸ್ ದೃಢಪಟ್ಟಿದ್ದು ಹಾಗಾದರೆ ನಿಜಕ್ಕೂ ಆತಂಕಕ್ಕೊಳಗಾಗುವ ಅವಶ್ಯಕತೆಯಿದೆಯೇ ಎಂದು ಕೇಳಿದಾಗ, ಭಯಪಡುವ ಆತಂಕವಿಲ್ಲ. ಹೆಚ್ಚು ನುರಿತ ವೈದ್ಯರು ಮತ್ತು ದಾದಿಯರು ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಬೇಕು. ಭಾರತದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿದೆ.ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಿವೆ. ಅವುಗಳಲ್ಲಿ ಚಿಕಿತ್ಸೆಗಳನ್ನು ಹೆಚ್ಚು ತ್ವರಿತವಾಗಿ ನೀಡಬೇಕಿದೆ ಎಂದು ರೊಡ್ರಿಕ್ ಹೇಳಿದರು.


ಈ ಸಂದರ್ಭದಲ್ಲಿ ನಾಗರಿಕರು ಏನು ಮಾಡಬೇಕು?: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜನರು ಆದಷ್ಟು ಸ್ವಚ್ಛತೆ ಕಾಪಾಡಬೇಕು. ಕೈಯನ್ನು ಆಗಾಗ ತೊಳೆಯುತ್ತಿರಬೇಕು, ಕೈ ತೊಳೆದ ನಂತರವೇ ಆಹಾರ ಸೇವಿಸಬೇಕು. ಸೀನುವಾಗ ಬಾಯಿಗೆ ಕವಚ ಹಾಕಿಕೊಳ್ಳುವುದು ಒಳ್ಳೆಯದು. ಕಾಯಿಲೆ ಬಂದ ತಕ್ಷಣ ವೈದ್ಯರಲ್ಲಿಗೆ ಹೋಗಿ ತೋರಿಸುವುದು ಉತ್ತಮ.


ಇಳಿ ವಯಸ್ಸಿನವರು ಮತ್ತು ಯುವಜನತೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ತಗಲುತ್ತಿದ್ದು ಈ ಎರಡು ಗುಂಪಿನ ವಯಸ್ಸಿನವರು ಹೆಚ್ಚು ಕಾಳಜಿ ವಹಿಸಬೇಕು ಎಂದು ರೊಡ್ರಿಕೊ ಹೇಳಿದ್ದಾರೆ.

SCROLL FOR NEXT