ವಿದೇಶ

ಪ್ರಕರಣ ತನಿಖಾ ಹಂತದಲ್ಲಿದ್ದು, ಸಂತ್ರಸ್ಥ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ: ವಿದೇಶಾಂಗ ಇಲಾಖೆ

Srinivasamurthy VN

ನವದೆಹಲಿ: ಐರ್ಲೆಂಡ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಮೈಸೂರು ಮೂಲದ ಮಹಿಳೆ ಮತ್ತು ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಕೊಲೆ ಪ್ರಕರಣ ತನಿಖಾ ಹಂತದಲ್ಲಿದ್ದು, ಸಂತ್ರಸ್ಥ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು  ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಐರ್ಲೆಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಘಟನೆಯಿಂದ ನಿಜಕ್ಕೂ ಆಘಾತವಾಗಿದೆ. ರಾಯಭಾರ ಕಚೇರಿ ವತಿಯಿಂದ ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಸಿದ್ಧವಾಗಿದ್ದೇವೆ. ಅಂತೆಯೇ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗೆ ಅಗತ್ಯ  ಮಾಹಿತಿ ನೀಡಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ 2 ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸಿ ಕುಟುಂಬಕ್ಕೆ ಬೆಂಬಲ ನೀಡಿದ ಘಟನೆಯನ್ನು ಶ್ಲಾಘಿಸಲಾಗುತ್ತದೆ. ಅಂತೆಯೇ ಘಟನೆ ಸಂಬಂಧ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದೇ ತನಿಖೆ ಪೂರ್ಣಗೊಳ್ಳುವವರೆಗೂ  ಶಾಂತವಾಗಿರುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ.

ಮೈಸೂರು ಮೂಲದ ಸೀಮಾ ಬಾನು ಸೈಯದ್ (37 ವರ್ಷ), ಮಗಳು ಅಸ್ಫಿರಾ ರಿಝಾ(11 ವರ್ಷ) ಮಗ ಫೈಜಾನ್‌ ಸೈಯದ್(06 ವರ್ಷ) ಅವರ ಶವಗಳು ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದೆ. ಇದು ಕೊಲೆ ಎಂದು ಶಂಕಿಸಲಾಗಿದ್ದು ಐದು ದಿನಗಳ  ಹಿಂದೆ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

SCROLL FOR NEXT