ವಿದೇಶ

ಎಲ್ಲಿದ್ದರೇನು? 'ಕಾಯಕ ಕಾಯಕವೇ': ಅಫ್ಘಾನ್ ಮಾಜಿ ಮಂತ್ರಿ ಈಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್!

Vishwanath S

ಲೀಪ್ಜಿಗ್ (ಜರ್ಮನಿ): ತಾಲಿಬಾನಿಗಳು ಈಗ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಒಮ್ಮೆ ಅಫ್ಘಾನಿಸ್ತಾನದಲ್ಲಿ ಮಂತ್ರಿಯಾಗಿದ್ದ ಸೈಯದ್ ಸದಾತ್ ಅವರು ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಹುದ್ದೆ ತೊರೆದಿದ್ದು ಇದೀಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. 

ವಾರದ ದಿನಗಳಲ್ಲಿ ಆರು ಗಂಟೆಗಳವರೆಗೆ ಮತ್ತು ಶನಿವಾರ ಮತ್ತು ಭಾನುವಾರದಂದು ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೆ, ಸದಾತ್ ತನ್ನ ವಿಶಿಷ್ಟವಾದ ಕಿತ್ತಳೆ ಬಣ್ಣದ ಕೋಟ್ ಮತ್ತು ದೊಡ್ಡ ಬ್ಯಾಗ್ ಅನ್ನು ಧರಿಸಿ ಪಿಜ್ಜಾಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ. 

'ಕೆಲಸದಲ್ಲಿ ಯಾವುದೇ ಬೇದವಿಲ್ಲ. ಕೆಲಸ ಕೆಲಸಾನೇ ಎಂದರು. 'ಕೆಲಸವಿದ್ದರೆ, ಸಾರ್ವಜನಿಕ ಬೇಡಿಕೆಯಿದೆ ಎಂದರ್ಥ. ಹೀಗಾಗಿ ಅದನ್ನು ಯಾರಾದರೂ ಮಾಡಬೇಕು ಎಂದು ಸದಾತ್ ಹೇಳಿದರು.

ಕಳೆದ ವರ್ಷಗಳಲ್ಲಿ ಜರ್ಮನಿಯಲ್ಲಿ ನೆಲೆ ಕಂಡುಕೊಂಡ ಸಾವಿರಾರು ಆಫ್ಘನ್ನರಲ್ಲಿ ಸದಾತ್ ಸಹ ಒಬ್ಬರಾಗಿದ್ದರು. 2015ರಿಂದ ಯುದ್ಧಗ್ರಸ್ಥ ಸಿರಿಯಾ ಮತ್ತು ಇರಾಕ್‌ ನಿಂದ ಅಪಾರ ಸಂಖ್ಯೆಯಲ್ಲಿ ಜನರು ಯುರೋಪ್ ಗಳಿಗೆ ಪಲಾಯನ ಮಾಡಿದ್ದರು. ಅದರಂತೆ ಸುಮಾರು 210,000 ಅಫ್ಘಾನಿಸ್ಥಾನಿಗಳು ಈಗ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ಜರ್ಮನಿಯು ಸುಮಾರು 4,000 ಅಫ್ಘಾನಿಸ್ತಾನಗಳನ್ನು ಸ್ಥಳಾಂತರಿಸಿದೆ. ಇದರಲ್ಲಿ ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡಿದವರು. ರಕ್ಷಣೆ ಅಗತ್ಯವಿರುವ ಇತರರು ಸೇರಿದ್ದಾರೆ.

2016ರಿಂದ 2018ರವರೆಗೆ ಅಫ್ಘಾನಿಸ್ತಾನದಲ್ಲಿ ಸಂವಹನ ಸಚಿವರಾಗಿದ್ದ ಸದಾತ್ ನೋವಿನಿಂದಲೇ ಜರ್ಮಿನಿಗೆ ಬಂದಿದ್ದರು. ಸರ್ಕಾರದಲ್ಲಿ ಭ್ರಷ್ಟಾಚಾರದಿಂದ 50 ವರ್ಷದ ಸದಾತ್ ಬೇಸತ್ತು ತಮ್ಮ ಹುದ್ದೆಯನ್ನು ತೊರೆದಿದ್ದರು. ಮಂತ್ರಿಯಾಗಿ ಕೆಲಸ ಮಾಡುವಾಗ ಅಧ್ಯಕ್ಷರ ಆಪ್ತ ವಲಯ ಮತ್ತು ನನ್ನ ನಡುವೆ ವ್ಯತ್ಯಾಸವಿತ್ತು ಎಂದು ಅವರು ವಿವರಿಸಿದರು.

ತಮ್ಮ ಖಾಸಗಿ ಲಾಭಕ್ಕಾಗಿ ಹಣವನ್ನು ವಿನಿಯೋಗಿಸುತ್ತಿದ್ದರು. ಆದರೆ  ಸರ್ಕಾರಿ ಯೋಜನೆಗಳ ಹಣವನ್ನು ಸರಿಯಾಗಿ ಜಾರಿಗೊಳಿಸಬೇಕೆಂದು ನಾನು ಬಯಸಿದ್ದೆ. ಹೀಗಾಗಿ ನಾನು ಅವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಅಲ್ಲದೆ ಅಧ್ಯಕ್ಷರ ಕಡೆಯಿಂದ ನನ್ನ ಮೇಲೆ ಒತ್ತಡ ಹೇರಿದರು. ಆದರೆ ಇದಕ್ಕೆ ನಾನು ಬಗ್ಗಿರಲಿಲ್ಲ. ಕೊನೆಗೆ ಬೇಸತ್ತು ಹುದ್ದೆ ತೊರೆದೆ ಎಂದು ಹೇಳಿದ್ದಾರೆ. 

2020ರ ವೇಳೆಗೆ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದು ನನ್ನ ಗಮನಕ್ಕೆ ಬರುತ್ತದೆ. ಹೀಗಾಗಿ ನಾನು ದೇಶ ತೊರೆಯುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.

SCROLL FOR NEXT