ವಿದೇಶ

ಕೊಲಂಬೊ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು: ಗೋಟಬಯ ರಾಜಪಕ್ಸ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Sumana Upadhyaya

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರನ್ನು ಶನಿವಾರ ರಾಜಧಾನಿ ಕೊಲಂಬೊದಲ್ಲಿರುವ ಅವರ ಅಧಿಕೃತ ನಿವಾಸದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉನ್ನತ ರಕ್ಷಣಾ ಮೂಲ ತಿಳಿಸಿದೆ. ದೂರದರ್ಶನದ ದೃಶ್ಯಾವಳಿಗಳಲ್ಲಿ ಗೋಟಬಯ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದು ಕಂಪೌಂಡ್ ಗೆ ನುಗ್ಗಿರುವುದನ್ನು ಕಾಣಬಹುದು. 

"ಅಧ್ಯಕ್ಷರನ್ನು ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ, ಉದ್ರಿಕ್ತ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗುವ ಸಾಧ್ಯತೆಯನ್ನು ತಡೆಯಲು ಭದ್ರತಾಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ. ಈ ಸಂದರ್ಭ 14 ಜನಕ್ಕೆ ಗಾಯಗಳಾಗಿವೆ. ಇಂದು ಸರ್ಕಾರದ ವಿರುದ್ಧ ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಲ್ಲಿ ಯೋಜಿತ ಪ್ರತಿಭಟನೆಗೆ ಮುನ್ನ ದೇಶದ ಏಳು ವಲಯಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಶ್ರೀಲಂಕಾ ಪೊಲೀಸರು ತೆಗೆದುಹಾಕಿದ್ದರ ಮಧ್ಯೆ ಈ ಘಟನೆ ನಡೆದಿದೆ. ಸರ್ಕಾರದ ವಿರುದ್ಧ ಉನ್ನತ ವಕೀಲರ ಸಂಘ, ಮಾನವ ಹಕ್ಕುಗಳ ಸಂಘಟನೆ ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. 

ಪಶ್ಚಿಮ ಪ್ರಾಂತ್ಯದ ನೆಗೊಂಬೊ, ಕೆಲನಿಯಾ, ನುಗೆಗೋಡ, ಮೌಂಟ್ ಲ್ಯಾವಿನಿಯಾ, ಕೊಲಂಬೊ ಉತ್ತರ, ಕೊಲಂಬೊ ದಕ್ಷಿಣ ಮತ್ತು ಕೊಲಂಬೊ ಸೆಂಟ್ರಲ್ ಸೇರಿದಂತೆ ಏಳು ಪೊಲೀಸ್ ವಿಭಾಗಗಳಲ್ಲಿ ನಿನ್ನೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಮುಂದಿನ ಸೂಚನೆ ಬರುವವರೆಗೆ ಕರ್ಫ್ಯೂ ವಿಧಿಸಲಾಗಿತ್ತು.

"ಪೊಲೀಸ್ ಕರ್ಫ್ಯೂ ಜಾರಿಗೊಳಿಸಿದ ಪ್ರದೇಶಗಳಲ್ಲಿ ವಾಸಿಸುವ ಜನರು ಮನೆಯಿಂದ ಹೊರಗೆ ಬರುವಂತಿಲ್ಲ, ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗುವುದು" ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸಿ.ಡಿ.ವಿಕ್ರಮರತ್ನ ನಿನ್ನೆ ತಿಳಿಸಿದ್ದರು.

ಶ್ರೀಲಂಕಾದ ವಕೀಲರ ಸಂಘ, ಪೊಲೀಸರ ಕರ್ಫ್ಯೂವನ್ನು ಅಕ್ರಮ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದೆ. 22 ಮಿಲಿಯನ್ ಜನರಿರುವ ಶ್ರೀಲಂಕಾ ಕಳೆದ ಏಳು ದಶಕಗಳಲ್ಲಿ ತೀವ್ರ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದೆ, ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ಬಳಲುತ್ತಿದೆ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಸರ್ಕಾರ ಹೆಣಗಾಡುತ್ತಿದೆ. ನಾಗರಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಕಷ್ಟವಾಗುತ್ತಿದೆ. 

ವಿದೇಶಿ ಸಾಲದ ಮರುಪಾವತಿ ವೈಫಲ್ಯಕ್ಕೆ ಶ್ರೀಲಂಕಾ ಸರ್ಕಾರ ಕಾರಣವಾಗಿದ್ದು, 2026 ರ ವೇಳೆಗೆ ಪಾವತಿ ಮಾಡಬೇಕಿರುವ ಬಾಕಿ ಇರುವ ಸುಮಾರು USD 25 ಶತಕೋಟಿಯಲ್ಲಿ ಈ ವರ್ಷಕ್ಕೆ ಸುಮಾರು USD 7 ಶತಕೋಟಿ ವಿದೇಶಿ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಕಳೆದ ಏಪ್ರಿಲ್ ನಲ್ಲಿ ಘೋಷಿಸಿತ್ತು.

ಶ್ರೀಲಂಕಾದ ಒಟ್ಟು ವಿದೇಶಿ ಸಾಲವು USD 51 ಬಿಲಿಯನ್ ಆಗಿದೆ.

SCROLL FOR NEXT