ವಿದೇಶ

ಭಾರತಕ್ಕೆ ಹಸ್ತಾಂತರದ ವಿರುದ್ಧ ಬ್ರಿಟನ್‌ನ ಉನ್ನತ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಅನುಮತಿ ಕೋರಿದ ನೀರವ್ ಮೋದಿ

Ramyashree GN

ಲಂಡನ್‌: ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ, ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರದ ವಿರುದ್ಧ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚನೆ ಪ್ರಕರಣ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮಾನಸಿಕ ಆರೋಗ್ಯದ ಆಧಾರದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ವಿಚಾರಣೆ ಎದುರಿಸಲು ಭಾರತಕ್ಕೆ ಮರಳಿ ಕಳಿಸುವುದರ ವಿರುದ್ಧ 51 ವರ್ಷದ ಉದ್ಯಮಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತವಾಗಿದೆ.

ಇಬ್ಬರು ನ್ಯಾಯಾಧೀಶರನ್ನೊಳಗೊಂಡ ಹೈಕೋರ್ಟ್ ಪೀಠವು, 'ನೀರವ್ ಮೋದಿ ಅವರು ಆತ್ಮಹತ್ಯೆಯ ಅಪಾಯಕ್ಕೆ ಒಳಗಾಗಬಹುದು ಎನ್ನುವ ವಾದವು ಅವರನ್ನು ಗಡಿಪಾರು ಮಾಡದಿರುವುದಕ್ಕೆ ಕಾರಣವಾಗುವುದಿಲ್ಲ. ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಅನ್ಯಾಯ ಅಥವಾ ದಬ್ಬಾಳಿಕೆಯಾಗುತ್ತದೆ ಎನ್ನುವುದಕ್ಕೆ ಪೂರಕ ಅಂಶಗಳಿಲ್ಲ' ಎಂದು ತಿಳಿಸಿದೆ.

ಆಗ್ನೇಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್, ಸಾಮಾನ್ಯ ಸಾರ್ವಜನಿಕ ಪ್ರಾಮುಖ್ಯತೆಯ ಕಾನೂನಿನ ಅಡಿಯಲ್ಲಿ ನೀರವ್ ಮೇಲ್ಮನವಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವಿದೆ.

ನೀರವ್ ಮೋದಿ ಅವರ ಮುಂದೆ ಇನ್ನೂ ಕಾನೂನು ಸವಾಲುಗಳು ಮುಂದಿರುವುದರಿಂದ ಭಾರತಕ್ಕೆ ಹಸ್ತಾಂತರವು ಯಾವಾಗ ನಡೆಯುತ್ತದೆ ಎಂಬುದು ತಿಳಿದಿಲ್ಲ ಎಂದು ಯುಕೆ ಗೃಹ ಕಚೇರಿ ಮೂಲಗಳು ತಿಳಿಸಿವೆ.

ಭಾರತೀಯ ಅಧಿಕಾರಿಗಳ ಪರವಾಗಿ ಕಾರ್ಯನಿರ್ವಹಿಸುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ಇದೀಗ ಇತ್ತೀಚಿನ ಅರ್ಜಿಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಇದನ್ನು ಅನುಸರಿಸಿ ಹೈಕೋರ್ಟ್ ನ್ಯಾಯಾಧೀಶರು ಪೂರ್ಣ ವಿಚಾರಣೆಯಿಲ್ಲದೆ ತೀರ್ಪು ನೀಡುತ್ತಾರೆ.

ಇಡೀ ಪ್ರಕ್ರಿಯೆಯು ಅಂತಿಮವಾಗಿ ಮುಂದಿನ ವರ್ಷ ನಡೆಯಬಹುದು. ಏಕೆಂದರೆ, ಮುಂದಿನ ತಿಂಗಳು ಕ್ರಿಸ್ಮಸ್ ರಜೆಯ ಅವಧಿಯನ್ನು ನೀಡಲಾಗಿದೆ.

2019ರ ಮಾರ್ಚ್‌ನಲ್ಲಿ ನೀರವ್ ಮೋದಿ ಬಂಧನವಾಗಿದ್ದು, ಆಗಿನಿಂದಲೂ ಲಂಡನ್ ಜೈಲಿನಲ್ಲಿದ್ದಾರೆ.

SCROLL FOR NEXT