ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆದ COP30 ಶೃಂಗ ಮುಕ್ತಾಯಗೊಂಡಿದ್ದು, ಭಾರತ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಹಲವಾರು ನಿರ್ಧಾರಗಳನ್ನೂ ಸ್ವಾಗತಿಸಿದೆ. ಆದರೆ ಹವಾಮಾನ ಬದಲಾವಣೆ ತಡೆಗಟ್ಟುವ ನೀತಿಯನ್ನು ರೂಪಿಸುವಲ್ಲಿ COP30 ಸಂಪೂರ್ಣ ಯಶಸ್ಸು ಕಂಡಿದೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲ.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ (UNFCCC) ಸಮಾರೋಪ ಸಭೆಯಲ್ಲಿ ಅಧಿಕೃತ ಘೋಷಣೆಗಳಿಗೆ ಭಾರತ ಬೆಂಬಲಿಸುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಕುರಿತ ಮಾತುಕತೆಗಳು, ವೈಪರೀತ್ಯಕ್ಕೆ ತುತ್ತಾಗುವ ದೇಶಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡುವ ಪ್ರತಿಜ್ಞೆಯೊಂದಿಗೆ ಕೊನೆಗೊಂಡಿದೆ. ಆದರೆ, ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ತೆಗೆದುಹಾಕುವ ಮಹತ್ವದ ವಿಚಾರ ಹವಾಮಾನ ಪ್ರತಿಜ್ಞೆಯಲ್ಲಿ ಕಂಡುಬಂದಿಲ್ಲ.
ಹವಾಮಾನ ಹಣಕಾಸು ಒದಗಿಸಲು ಅಭಿವೃದ್ಧಿ ಹೊಂದಿದ ದೇಶಗಳ ದೀರ್ಘಕಾಲೀನ ಬಾಧ್ಯತೆಗಳ ಮೇಲೆ ಒತ್ತು ನೀಡುವುದು ಭಾರತದ ಭಾಷಣದ ಪ್ರಮುಖ ಅಂಶವಾಗಿತ್ತು. ಪ್ಯಾರಿಸ್ ಒಪ್ಪಂದದ 9.1ನೇ ವಿಧಿಯ ಮೇಲೆ ದೀರ್ಘಕಾಲೀನ ಗಮನ ಹರಿಸುವತ್ತ ಅಧ್ಯಕ್ಷರು ತೆಗೆದುಕೊಂಡ ಪ್ರಯತ್ನಗಳಿಗೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ.
COP30 ಶೃಂಗ ಸ್ಥಳದಲ್ಲಿ ಬೆಂಕಿ ಅವಘಡ: ನವೆಂಬರ್ 20ರಂದು COP30 ಶೃಂಗದ ಮುಖ್ಯ ಸ್ಥಳದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಇದರಿಂದ 27 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ, ಯಾರಿಗೂ ಸುಟ್ಟ ಗಾಯಗಳಾಗಿಲ್ಲ. ಇದರಿಂದ ಶೃಂಗವು ವಿಸ್ತರಿಸಲ್ಪಟ್ಟಿತು.