ಕೊಲೊಂಬೊ: ಕತಾರ್ ಏರ್ವೇಸ್ ವಿಮಾನದಲ್ಲಿ 85 ವರ್ಷದ ಸಸ್ಯಾಹಾರಿ ಪ್ರಯಾಣಿಕನೊಬ್ಬ ಮಾಂಸಾಹಾರಿ ಊಟ ಸೇವಿಸಿ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ ಮೃತಪಟ್ಟ ಪ್ರಯಾಣಿಕ. ಲಾಸ್ ಏಂಜಲೀಸ್ನಿಂದ ಕೊಲಂಬೊಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇವರು ಸಸ್ಯಹಾರಿ ಊಟ ಆರ್ಡರ್ ಮಾಡಿದ್ದರು. ಆದರೆ, ಅದ್ಯಾವುದೂ ಲಭ್ಯವಿಲ್ಲ ಎಂದು ವಿಮಾನ ಸಿಬ್ಬಂದಿ ತಿಳಿಸಿದರು. ಬಳಿಕ ಮಾಂಸಾಹಾರ ಊಟವನ್ನೇ ತಂದುಕೊಟ್ಟರು. ಅದನ್ನೇ ತಿನ್ನುವಂತೆ ಇತರೆ ಪ್ರಯಾಣಿಕರು ಸಲಹೆ ನೀಡಿದರು.
ಕೊನೆಗೆ ಮಾಂಸಾಹಾರ ಸೇವಿಸುವಾಗ ಪ್ರಯಾಣಿಕನಿಗೆ ಉಸಿರುಗಟ್ಟುವಂತಾಗಿದೆ. ಕೊನೆಗೆ ಪ್ರಜ್ಞೆ ಕಳೆದುಕೊಂಡರು. ಅವರನ್ನು ಎಚ್ಚರಿಸಲು ಪ್ರಯತ್ನಿಸಲಾಯಿತು. ಆದರೆ, ಪ್ರಯಾಣಿಕನ ಸ್ಥಿತಿ ಹದಗೆಟ್ಟಿತ್ತು. ವಿಮಾನವು ಅಂತಿಮವಾಗಿ ಸ್ಕಾಟ್ಲೆಂಡ್ನ ಎಡಿನ್ಬರ್ಗ್ನಲ್ಲಿ ಇಳಿಯಿತು.
ಅಲ್ಲಿ ಪ್ರಯಾಣಿಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ವ್ಯಕ್ತಿ ಮೃತಪಟ್ಟಿದ್ದ. ಅವರು ಆಸ್ಪಿರೇಷನ್ ನ್ಯುಮೋನಿಯಾದಿಂದ ಕೊನೆಯುಸಿರೆಳೆದಿದ್ದಾರೆ.
ಮೃತ ಪ್ರಯಾಣಿಕನ ಪುತ್ರ ಸೂರ್ ಜಯವೀರ್ ಕತಾರ್ ಏರ್ವೇಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಊಟ ಮತ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಮೊದಲೇ ಆರ್ಡರ್ ಮಾಡಿದ ಸಸ್ಯಾಹಾರಿ ಊಟವನ್ನು ಒದಗಿಸಲು ವಿಫಲವಾಗಿದೆ.
ಜಯವೀರ ಅವರ ವೈದ್ಯಕೀಯ ತುರ್ತುಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಪರಿಹಾರಕ್ಕೂ ಬೇಡಿಕೆ ಇಟ್ಟಿದ್ದಾರೆ.